ರಂಗಕರ್ಮಿ, ನಟ ರಾಮ್ ಶೆಟ್ಟಿ ಹಾರಾಡಿ ರೋಟರಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ
ಬ್ರಹ್ಮಾವರ, ಫೆ.19: ರೋಟರಿ ಬ್ರಹ್ಮಾವರ ಇವರು ಕೊಡಮಾಡುವ 2019ನೇ ಸಾಲಿನ ‘ರೋಟರಿ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಖ್ಯಾತ ರಂಗಕರ್ಮಿ, ನಟ, ನಿರ್ದೇಶಕ ಬಿ.ಎಸ್.ರಾಮ್ ಶೆಟ್ಟಿ ಹಾರಾಡಿ ಆಯ್ಕೆಯಾಗಿದ್ದಾರೆ ಎಂದು ರೋಟರಿ ಬ್ರಹ್ಮಾವರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸಿದ್ಧ ನಿರ್ದೇಶಕರೂ ಆಗಿರುವ ಬಿ.ಎಸ್.ರಾಮಶೆಟ್ಟಿ, ಭೂಮಿಕಾ ಹಾರಾಡಿ ಎಂಬ ರಂಗ ತಂಡವನ್ನು ಕಟ್ಟಿ ಕಳೆದ 20 ವರ್ಷಗಳಿಂದ ಮುನ್ನಡೆಸಿಕೊಂಡು ಬರುತಿದ್ದಾರೆ. ರಾಜ್ಯ ಮತ್ತು ರಾಷ್ಟಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ತಂಡವನ್ನು ಕಟ್ಟಿ ಗ್ರಾಮೀಣ ಭಾಗದ ಯುವಕರಲ್ಲಿ ರಂಗಾಸಕ್ತಿಯನ್ನು ಬೆಳೆಸಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಶಾಲೆಯನ್ನು ಸತತ ಪ್ರಗತಿ ಪಥದತ್ತ ಮುನ್ನಡೆಸಿದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರು ಇವರಾಗಿದ್ದು, ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾತರಬೇತಿಯನ್ನು ನೀಡಿ ಆ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸುವಲ್ಲಿ ಶ್ರಮಿಸಿದ ಅತ್ಯುತ್ತಮ ದೈಹಿಕಶಿಕ್ಷಕರು. ಬ್ರಹ್ಮಾವರ ಪರಿಸರಕ್ಕೆ ರಾಜ್ಯದ ವಿವಿಧ ಪ್ರದೇಶಗಳ ನಾಟಕ ತಂಡಗಳನ್ನು ಕರೆಸಿ ನಾಟಕೋತ್ಸವಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ಕಂಪನ್ನು ಪಸರಿಸಿದ ಶ್ರೇಷ್ಠ ಸಂಘಟಕರಾಗಿಯೂ ಬಿ.ಎಸ್.ರಾಂ ಶೆಟ್ಟಿ ಹಾರಾಡಿ ಗುರುತಿಸಿಕೊಂಡಿದ್ದಾರೆ.
ರೋಟರಿ ಬ್ರಹ್ಮಾವರ ನೀಡುವ ಈ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಫೆ.24ರ ರವಿವಾರ ಸಂಜೆ 6:00 ಗಂಟೆಗೆ ನಿರ್ಮಲ ಹೈಸ್ಕೂಲ್ ಸಭಾಂಗಣ ದಲ್ಲಿ ನಡೆಯುವ ‘ವೊಯ್ಸಿ ಆಫ್ ಕರಾವಳಿ’ ಫೈನಲ್ಸ್ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ರೋಟರಿ ಬ್ರಹ್ಮಾವರ ಪ್ರಕಟಣೆಯಲ್ಲಿತಿಳಿಸಿದೆ.