ಪರಿಸರ ಹೋರಾಟಗಾರ ನಾಪತ್ತೆ: ಫೆ. 22ರ ಒಳಗೆ ಪ್ರತಿಕ್ರಿಯೆ ನೀಡಲು ಮದ್ರಾಸ್ ಹೈಕೋರ್ಟ್ ನಿರ್ದೇಶನ
ಚೆನ್ನೈ, ಫೆ. 19: ಪರಿಸರ ಹೋರಾಟಗಾರ ಎಸ್ ಮುಗಿಲನ್ ಚೆನ್ನೈಯಿಂದ ಮಧುರೈಗೆ ರೈಲಿನ ಮೂಲಕ ಸಂಚರಿಸುತ್ತಿದ್ದಾಗ ನಾಪತ್ತೆಯಾದ ಎರಡು ದಿನಗಳ ಬಳಿಕ ಮಾನವ ಹಕ್ಕು ಹೋರಾಟಗಾರ ಹಾಗೂ ಪೀಪಲ್ಸ್ ವಾಚ್ ಸ್ಥಾಪಕ ಹೆನ್ರಿ ತಿಫಾಂಗೆ ದಾಖಲಿಸಿದ ಹೇಬಿಯಸ್ ಕಾರ್ಪಸ್ ಹಿನ್ನೆಲೆಯಲ್ಲಿ ಫೆಬ್ರವರಿ 22ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಚೆನ್ನೈ ಪೊಲೀಸ್ ಕಮಿಷನರ್ ಹಾಗೂ ವಿಲ್ಲಾಪುರಂ-ಕಾಂಚಿಪುರಂ ಎಸ್ಪಿಗಳಿಗೆ ನಿರ್ದೇಶಿಸಿದೆ.
ಹೋರಾಟಗಾರ ಮುಗಿಲನ್ ನಾಪತ್ತೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೆನ್ರಿ ತಿಫಾಂಗೆ ಅವರು, ಮುಗಿಲನ್ರನ್ನು ಬಂಧಿಸಿರುವುದನ್ನು ವಿಲ್ಲಾಪುರಂ ಪೊಲೀಸರು ನ್ಯಾಯಾಲಯದಲ್ಲಿ ನಿರಾಕರಿಸಿದ್ದಾರೆ. ಸ್ಟರ್ಲೈಟ್ ಕುರಿತು ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಹ್ನಿನೆಲೆಯಲ್ಲಿ ಮುಗಿಲನ್ ಅಪಾಯದಲ್ಲಿ ಇರುವ ಸಾಧ್ಯತೆ ಬಗ್ಗೆ ನಮಗೆ ಭಯವಾಗುತ್ತಿದೆ ಎಂದಿದ್ದಾರೆ.
ಸ್ಟರ್ಲೈಟ್ ಘಟಕವನ್ನು ಮರು ಆರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿತ್ತು ಹಾಗೂ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸ್ಟರ್ಲೈಟ್ಗೆ ಸೂಚಿಸಿತ್ತು.
ಸುಪ್ರೀಂ ಕೋರ್ಟ್ನ ತೀರ್ಪು ಹೊರಬೀಳುವುದಕ್ಕಿಂತ ಮೊದಲು ಮುಗಿಲನ್ ತನ್ನ ಸಾಕ್ಷಚಿತ್ರ ‘ಈ ಮರೆ ಮಾಚಿದ ಸತ್ಯವನ್ನು ದಹಿಸಿದವರು ಯಾರು ?’ ಬಿಡುಗಡೆ ಮಾಡಲು ಚೆನ್ನೈಯಲ್ಲಿ ಪತ್ರಕರ್ತರನ್ನು ಭೇಟಿಯಾಗಿದ್ದರು.