ಭಯೋತ್ಪಾದಕ ದಾಳಿಗಳನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ಕೇಂದ್ರಕ್ಕೆ ಶಿವಸೇನೆ ಎಚ್ಚರಿಕೆ
ಮುಂಬೈ,ಫೆ.19: ಬಿಜೆಪಿಯೊಂದಿಗೆ ಹದಗೆಟ್ಟಿದ್ದ ಸಂಬಂಧಕ್ಕೆ ತೇಪೆ ಹಾಕಿಕೊಂಡು ಮುಂಬರುವ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಸ್ಥಾನ ಹಂಚಿಕೆ ಒಪ್ಪಂದವನ್ನು ಮಾಡಿಕೊಂಡ ಬೆನ್ನಲ್ಲೇ ಶಿವಸೇನೆಯು ಮಂಗಳವಾರ ಮಿತ್ರಪಕ್ಷದ ವಿರುದ್ಧ ದಾಳಿ ನಡೆಸಿದೆ. ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ತಾನು ಯುದ್ಧವನ್ನು ಸಾರಲು ಪ್ರಯತ್ನಿಸುತ್ತಿದ್ದೇನೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವ ರೀತಿಯಲ್ಲಿ ವರ್ತಿಸದಂತೆ ಅದು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಸೂಚಿಸಿದೆ.
ದಂಗೆಗಳು ಮತ್ತು ಭಯೋತ್ಪಾದಕ ದಾಳಿಗಳನ್ನು ರಾಜಕೀಯ ಲಾಭ ಗಳಿಕೆಗೆ ಬಳಸಕೂಡದು ಎಂದು ಪಕ್ಷದ ಮುಖವಾಣಿ ‘ಸಾಮನಾ’ದ ಸಂಪಾದಕೀಯದಲ್ಲಿ ಹೇಳಿರುವ ಶಿವಸೇನೆಯು,ಪುಲ್ವಾಮಾ ದಾಳಿಯ ಬಳಿಕ ದೇಶದ ಇತರೆಡೆಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡೆಯುತ್ತಿರುವುದು ಸರಕಾರಕ್ಕೆ ಹೆಚ್ಚಿನ ತೊಂದರೆಗಳನ್ನು ತರಬಹುದು ಎಂದು ಎಚ್ಚರಿಕೆ ನೀಡಿದೆ. 1984ರ ಸಿಖ್ ವಿರೋಧಿ ದಂಗೆಗಳನ್ನು ನೆನಪಿಸಿರುವ ಅದು,ಕಾಂಗ್ರೆಸ್ ಈಗಲೂ ಅದಕ್ಕಾಗಿ ದುಬಾರಿ ಬೆಲೆಯನ್ನು ತೆರುತ್ತಿದೆ ಎಂದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಗಳಲ್ಲಿ ಗೆಲ್ಲಲು ಸಣ್ಣಪ್ರಮಾಣದ ಯುದ್ಧವನ್ನು ಸಾರಬಹುದು ಎಂಬ ರಾಜಕೀಯ ಆರೋಪಗಳು ಕೆಲವು ದಿನಗಳ ಹಿಂದೆ ಕೇಳಿಬಂದಿದ್ದವು. ಈ ಆರೋಪಗಳು ಪುಷ್ಟಿಗೊಳ್ಳುವ ರೀತಿಯಲ್ಲಿ ಆಡಳಿತಗಾರರು ನಡೆದುಕೊಳ್ಳಬಾರದು ಎಂದು ಯಾರನ್ನೂ ಹೆಸರಿಸದೆ ಸಂಪಾದಕೀಯವು ಹೇಳಿದೆ.
ಫೆ.14ರ ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಿರುವ ಅದು, ಈ ಭಯೋತ್ಪಾದಕ ದಾಳಿಯ ಕುರಿತು ದೇಶವು ಈಗಲೂ ಆಕ್ರೋಶದಿಂದ ಕುದಿಯುತ್ತಿದೆ,ಹೀಗಾಗಿ ಕೆಲವು ಟೀಕೆಗಳು ಎದುರಾಗಬಹುದು. ಆದರೆ ದಂಗೆಗಳು ಮತ್ತು ಭಯೋತ್ಪಾದಕ ದಾಳಿಗಳು ರಾಜಕೀಯ ಲಾಭ ಗಳಿಕೆಗೆ ಬಳಕೆಯಾಗಬಾರದು ಎಂದಿದೆ.
ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತು ಕೆಲವು ಜನಪ್ರತಿನಿಧಿಗಳ ವಿವಾದಾತ್ಮಕ ಹೇಳಿಕೆಗಳನ್ನೂ ಶಿವಸೇನೆಯು ತರಾಟೆಗೆತ್ತಿಕೊಂಡಿದೆ.
ಪ್ರಧಾನಿಯವರಿಗೆ ಜೀವ ಬೆದರಿಕೆಯಿದೆ ಎನ್ನಲಾಗುವ ಇ-ಮೇಲ್ನ್ನು ನಮ್ಮ ಗುಪ್ತಚರ ಅಧಿಕಾರಿಗಳು ಪತ್ತೆ ಹಚ್ಚುತ್ತಾರೆ, ಆದರೆ ಸೇನಾ ವಾಹನಗಳ ಸಾಲಿನ ಮೇಲೆ ಭಯೋತ್ಪಾದಕ ದಾಳಿಯನ್ನು ತಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದೂ ಅದು ಕುಟುಕಿದೆ.