ಚಾಮರಾಜನಗರ ಜಿಲ್ಲೆ ಜಾನಪದ ಕಲಾ ಕಾವ್ಯಗಳ ತವರೂರು: ಶಾಸಕ ಆರ್.ನರೇಂದ್ರ
ಹನೂರು,ಫೆ.23: ಚಾಮರಾಜನಗರ ಜಿಲ್ಲೆ ಜಾನಪದ ಕಲಾ ಕಾವ್ಯಗಳ ತವರೂರಾಗಿದ್ದು, ಮಲೆ ಮಹದೇಶ್ವರಬೆಟ್ಟ ಜಿಲ್ಲೆಗೆ ಕಿರೀಟ ಪ್ರಾಯದಂತಿದೆ. ರಾಜ್ಯದ ಮುಂದುವರಿದ ಜಿಲ್ಲೆಗಳಲ್ಲಿ ಚಾ.ನಗರ ಜಿಲ್ಲೆಯೂ ಕೂಡ ಒಂದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಆರ್.ನರೇಂದ್ರ ಹೇಳಿದರು.
ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ನಾಗಮಲೆ ಭವನದಲ್ಲಿ ಕರ್ನಾಟಕ ಅಕಾಡೆಮಿ ಬೆಂಗಳೂರು, ಕೇಂದ್ರ ಕನ್ನಡ ವಿಶ್ವ ವಿದ್ಯಾಲಯ ಹಂಪಿ, ಕುರುಬನಕಟ್ಟೆ ಹಾಗೂ ಮಲೆ ಮಹದೇಶ್ವರಸ್ವಾಮಿ ಅಭಿವೃದ್ದಿ ಪ್ರಾಧಿಕಾರ ಮ.ಬೆಟ್ಟ ವತಿಯಿಂದ ಆಯೋಜಿಸಲಾಗಿದ್ದ ಜಾನಪದ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಮತ್ತು ಅಭಿವೃದ್ದಿ ಚಿಂತನೆಗಳ ಅಧ್ಯಯನ ಕಮ್ಮಟ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಾನಪದ ಕಲೆ ಕಾವ್ಯ ಹಾಡುಗಳಿಂದ ಅಕ್ಷರ ಜ್ಞಾನ ಮತ್ತು ಸಾಮಾನ್ಯ ಜ್ಞಾನಕ್ಕೆ ವ್ಯತ್ಯಾಸ ಇದೆ. ಗ್ರಾಮೀಣ ಭಾಗದ ಹಳ್ಳಿ ಜನರು ಸಾಮಾನ್ಯ ಜ್ಞಾನ ಹೊಂದಿರುವ ಜ್ಞಾನ ಭಂಡರವಾಗಿರುತ್ತಾರೆ. ಇವರು ಸಮಾಜದಲ್ಲಿ ಬೆಳಕಿಗೆ ಬರುವುದಿಲ್ಲ. ಆದರೆ ಅಕ್ಷರ ಜ್ಞಾನವುಳ್ಳವರಿಗೆ ಡಾಕ್ಟರೇಟ್ ಸೇರಿದಂತೆ ಇನ್ನಿತರ ಪದವಿಗಳು ಲಭಿಸಿ ಪ್ರಚಾರದಲ್ಲಿರುತ್ತಾರೆ ಎಂದರು.
ಇದೇ ವೇಳೆ ಮಂಗಲ ಗ್ರಾಮದ ಜಾನಪದ ಕಲಾವಿದೆ ಮರಿಸಿದ್ದಮ್ಮ ಮತ್ತು ತಂಡದವರಿಗೆ ಪ್ರಸಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಅಕಾಡೆಮಿ ಅಧ್ಯಕ್ಷ ತಾಕಪ್ಪ ಕಣ್ಣೂರು, ವಿಚಾರ ಮಂಡನೆ ಕಾಳೇಗೌಡ, ಸಂಚಾಲಕ ವೆಂಕಟೇಶ್ ಇಂದುವಾಡಿ, ರಾಜಶೇಖರ್, ಗ್ರಾ.ಪಂ ಅಧ್ಯಕ್ಷೆ ರುಕ್ಮಣಿ, ಉಪಾಧ್ಯಕ್ಷ ಮಾದೇಶ್, ಸಂಶೋಧನೆ ವಿದ್ಯಾರ್ಥಿಗಳು ಸೇರಿ ಅನೇಕರು ಇದ್ದರು.