ಏರ್ ಶೋದಲ್ಲಿ ಅಗ್ನಿ ದುರಂತ: ಘಟನಾ ಸ್ಥಳಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಬೆಂಗಳೂರು, ಫೆ.24: ಏರ್ ಶೋ ನಡೆಯುತ್ತಿರುವ ಯಲಹಂಕದ ವಾಯುನೆಲೆಯ ವಾಹನಗಳ ಪಾರ್ಕ್ಂಗ್ ಜಾಗದಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಿಂದಾಗಿ 277 ಕಾರುಗಳು ಸುಟ್ಟು ಕರಕಲಾಗಿದ್ದು, ಇಂದು ಸ್ಥಳದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿ ಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.
ಮುನ್ನಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ 100ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಘಟನಾ ಸ್ಥಳಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ಸಂಭವಿಸಿದ ಅಗ್ನಿ ದುರಂತದ ತನಿಖೆ ಮುಂದುವರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಹೇಳಿದ್ದಾರೆ.
ಪಾರ್ಕಿಂಗ್ ಜಾಗದಲ್ಲಿ ಒಣಹುಲ್ಲಿಗೆ ಬೆಂಕಿ ತಗಲಿದ ಪರಿಣಾಮವಾಗಿ ಅಲ್ಲಿದ್ದ ಕಾರುಗಳು ಬೆಂಕಿಯಿಂದ ಧಗ ಧಗ ಉರಿದು ಸುಟ್ಟು ಕರಕಲಾಗಿತ್ತು.
ಮೂರು ದಿನಗಳಿಂದ ಯಾವುದೇ ಅಡೆತಡೆ ಇಲ್ಲದೆ ಏರ್ ಶೋ ನಡೆದಿತ್ತು. ಆದರೆ ನಿನ್ನೆ ಬೆಂಕಿಯಿಂದಾಗಿ ಏರ್ ಶೋಗೆ ಸ್ವಲ್ಪ ಹೊತ್ತು ಅಡ್ಡಿ ಉಂಟಾಗಿತ್ತು.
ಏರ್ ಶೋ ಆರಂಭವಾಗುವ ಒಂದು ದಿನ ಮೊದಲು ಸೂರ್ಯಕಿರಣ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಪೈಲೆಟ್ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದರು.
ಫೆ. 1 ರಂದು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ತಾಲೀಮು ನಡೆಸುತ್ತಿದ್ದ ಮೀರಾಜ್ ಯುದ್ಧ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪೈಲೆಟ್ಗಳು ಸಾವನ್ನಪ್ಪಿದ್ದರು.