ಶಂ.ಗು. ಬಿರಾದಾರರ ಸ್ಮಾರಕವಾಗಲಿ
ಮಾನ್ಯರೇ,
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದವರಾದ ಶಂ. ಗು. ಬಿರಾದಾರ ನಾಡು ಕಂಡ ಮಕ್ಕಳ ಸಾಹಿತಿಗಳಲ್ಲಿ ಅಗ್ರಗಣ್ಯರು.ಮಕ್ಕಳ ಕುರಿತಾದ ಅತ್ಯುತ್ತಮ ಶಿಶು ಕವನಗಳನ್ನು ರಚಿಸುವುದರೊಂದಿಗೆ ಮಕ್ಕಳ ಸಾಹಿತ್ಯಕ್ಕೆ ಹೊಸ ಸ್ಪರ್ಶ ನೀಡಿ ಮಕ್ಕಳ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಇವರು ರಚಿಸಿದ ‘ನಾವು ಎಳೆಯರು ನಾವು ಗೆಳೆಯರು’, ‘ಹೃದಯ ಹೂವಿನ ಹಂದರ’ ಎಂಬ ಕವನ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಸದಾ ಮಿಡಿಯುತ್ತಲೇ ಇದೆ. ಮಕ್ಕಳ ಹೃದಯದಲ್ಲಿ ಸದಾ ಏಕತೆಯನ್ನು ಉಂಟು ಮಾಡುವ ರಾಷ್ಟ್ರ ಪ್ರೇಮ, ನಾಡಿನ ಅಭಿಮಾನ, ಪರಿಸರ ರಕ್ಷಣೆ ಕುರಿತಾದ ನೂರಾರು ಶಿಶುಗವನಗಳನ್ನು ರಚಿಸಿ ಮಕ್ಕಳಲ್ಲಿನ ಸಂಕುಚಿತ ಭಾವನೆಗಳನ್ನು ಹೋಗಲಾಡಿಸಿ, ಮನೋವಿಕಾಸ ಹೆಚ್ಚಿಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಮಕ್ಕಳಿಗೆ ಮನ ಮುಟ್ಟುವಂತೆ ಪಾಠ ಬೋಧಿಸುತ್ತ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರೆನಿಸಿದವರು.
ವೃತ್ತಿಯೊಂದಿಗೆ ಸಾಹಿತ್ಯ ಪ್ರವೃತ್ತಿಯಲ್ಲಿ ಬೆಳೆಸಿಕೊಂಡು ಅದೆಷ್ಟೋ ಕಥೆ, ಕವನ, ಪ್ರಬಂಧ, ಕಾದಂಬರಿ, ಕಥಾ ಸಂಕಲನ, ಜೀವನ ಚರಿತ್ರೆ, ಕವನ ಸಂಕಲನ, ಲಲಿತ ಪ್ರಬಂಧಗಳು, ಚುಟುಕು ಹನಿಗವಿತೆಗಳು ಹೀಗೆ ಇವರ ಹಲವು ಸಾಹಿತ್ಯ ಕೃತಿಗಳು ಓದುಗರಿಂದ ಜನ ಮನ್ನಣೆ ದೊರಕಿಸಿಕೊಟ್ಟಿವೆ. ಈ ಮೂಲಕ ಶಂ.ಗು. ಬಿರಾದಾರ ಸಾಹಿತ್ಯದ ಪಯಣ ಶ್ರೀಮಂತಗೊಂಡಿದೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡ ವಿದ್ಯಾವರ್ಧಕ ಸಂಘ, ಬಿ.ಎಂ.ಶ್ರೀ. ಪ್ರತಿಷ್ಠಾನ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು ಪ್ರಶಸ್ತಿ, ಪುರಸ್ಕಾರ, ಸನ್ಮಾನ ನೀಡಿ ಗೌರವಿಸಿವೆ. ಅಲ್ಲದೇ ಇವರು ಶಿಕ್ಷಕ ವೃತ್ತಿಯಲ್ಲಿ ಸುದೀರ್ಘವಾಗಿ ಅತ್ಯುತ್ತಮ ಸೇವೆಯನ್ನು ಕಂಡು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ. ಹೀಗೆ ಬದುಕಿನುದ್ದಕ್ಕೂ ಕನ್ನಡ ನಾಡು, ನುಡಿ, ನೆಲ ಜಲ, ಮಕ್ಕಳ ಸಾಹಿತ್ಯಕ್ಕಾಗಿಯೇ ಜೀವನ ಮೀಸಲಿಟ್ಟವರು. ಆದ್ದರಿಂದ ಜಿಲ್ಲೆಯ ಸರ್ವ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಇವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಮಕ್ಕಳ ಬಾಲ ವನ ನಿರ್ಮಿಸಬೇಕಿದೆ. ಸರಕಾರದಿಂದ ನಡೆಯುವ ಮಕ್ಕಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇವರ ಸ್ಮರಿಸುವ ಕೆಲಸ ಮಾಡಬೇಕಿದೆ. ಇವರ ಸಮಾಧಿಯನ್ನು ಸ್ಮಾರಕವಾಗಿಸಿ ಮಕ್ಕಳಿಗೆ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಎಂಬುವುದು ನಾಡಿನ ಸಾಹಿತ್ಯಾಸಕ್ತರ ಒತ್ತಾಸೆಯಾಗಿದೆ. ಈ ಕುರಿತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು.