ರಾಹುಲ್ ಗಾಂಧಿ ಮುಸ್ಲಿಂ ಮತ್ತು ಕ್ರೈಸ್ತರಿಗೆ ಹುಟ್ಟಿದ ಪರದೇಸಿ ಎಂದ ಅನಂತ್ ಕುಮಾರ್ ಹೆಗಡೆ
ಕೇಂದ್ರ ಸಚಿವರಿಂದ ಕೀಳುಮಟ್ಟದ ಹೇಳಿಕೆ
ಬೆಂಗಳೂರು, ಮಾ.11: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ವಿವಾದದ ಧೂಳೆಬ್ಬಿಸಿದ್ದಾರಲ್ಲದೆ. “ರಾಹುಲ್ ಗಾಂಧಿ ಮುಸ್ಲಿಂ ಮತ್ತು ಕ್ರೈಸ್ತ ಹೆತ್ತವರಿಗೆ ಹುಟ್ಟಿದ ಪರದೇಸಿ'' ಎಂದು ಅನಂತ್ ಕುಮಾರ್ ಹೆಗಡೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿರುವ ಹೆಗಡೆ ``ಅವರು (ಕಾಂಗ್ರೆಸ್) ನಮಗೆ ತಂದಿರುವ ದಯನೀಯ ಪರಿಸ್ಥಿತಿಯನ್ನು ನೋಡಿ. ಇಡೀ ಜಗತ್ತೇ ನಮ್ಮ ಸೈನಿಕರ ಧೈರ್ಯ ಮತ್ತು ಸಾಹಸದ ಗುಣಗಾನ ಮಾಡುತ್ತಿದ್ದರೆ, ಈ ವ್ಯಕ್ತಿ (ರಾಹುಲ್ ಗಾಂಧಿ) ದಾಳಿಯಲ್ಲಾದ (ಬಾಲಕೋಟ್ ವಾಯು ದಾಳಿ) ಹಾನಿಗೆ ಪುರಾವೆ ಕೇಳುತ್ತಿದ್ದಾರೆ. ಮುಸ್ಲಿಮರೊಬ್ಬರ ಪುತ್ರ ಗಾಂಧಿ ಎಂಬ ಹೆಸರಿನ ಬ್ರಾಹ್ಮಣನಾಗಿದ್ದು ಹೇಗೆ?, ಈ ಪರದೇಸಿ ಮುಸ್ಲಿಂ ಮತ್ತು ಕ್ರೈಸ್ತಗೆ ಹುಟ್ಟಿದವರು. ಅವರು ಹೇಗೆ ಬ್ರಾಹ್ಮಣರಾದರು?, ಡಿಎನ್ಎ ಸಾಕ್ಷಿ ಒದಗಿಸಬಲ್ಲರೇ?'' ಎಂದು ಪ್ರಶ್ನಿಸಿದ್ದಾರೆ.
ಅನಂತ ಕುಮಾರ್ ಹೆಗಡೆ ಈಗಾಗಲೇ ಮುಸ್ಲಿಂ ಸಮುದಾಯ, ಮಹಿಳೆಯರು ಹಾಗೂ ಸಂವಿಧಾನದ ವಿರುದ್ಧವೇ ಹೇಳಿಕೆ ನೀಡಿ ವಿವಾದಕ್ಕೀಡಾದವರಾಗಿದ್ದಾರಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಹೇಳಿಕೆಗಳಿಗೆ ಕ್ಷಮೆ ಯಾಚಿಸಿಲ್ಲ.
ಜನವರಿಯಲ್ಲಿ ಅವರು ರಾಹುಲ್ ಗಾಂಧಿಯನ್ನು, “ಮುಸ್ಲಿಂ ಮತ್ತು ಕ್ರೈಸ್ತಗೆ ಹುಟ್ಟಿದ ಮಿಶ್ರ ತಳಿ'' ಎಂದು ಹೇಳಿ ವಿವಾದಕ್ಕಿಡಾಗಿದ್ದರು.