ಸಂಜೋತಾ ಸ್ಫೋಟ ಪ್ರಕರಣ: ವಿಚಾರಣೆ ಮುಂದೂಡಿದ ಎನ್ಐಎ
ಪಂಚಕುಲ,ಮಾ.14: ಸ್ಥಳೀಯ ವಕೀಲರು ಬಂದ್ ಆಚರಿಸುತ್ತಿರುವ ಪರಿಣಾಮ 2007ರ ಸಂಜೋತ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ಹರ್ಯಾಣದ ಪಂಚಕುಲದಲ್ಲಿರುವ ಭಯೋತ್ಪಾದನೆನಿಗ್ರಹ ನ್ಯಾಯಾಲಯ ಮಾರ್ಚ್ 18ಕ್ಕೆ ಮುಂದೂಡಿದೆ. ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ಮುಂದೂಡಿದ್ದಾರೆ ಎಂದು ಎನ್ಐಎ ವಕೀಲ ರಾಜನ್ ಮಲ್ಹೋತ್ರಾ ತಿಳಿಸಿದ್ದಾರೆ.
ನ್ಯಾಯವಾದಿಯೊಂದಿಗೆ ಮ್ಯಾಜಿಸ್ಟ್ರೇಟ್ವೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನ್ಯಾಯವಾದಿಗಳು ಮಾರ್ಚ್ 12ರಿಂದ ಅನಿರ್ದಿಷ್ಟಾವಧಿ ಬಂದ್ ಆಚರಿಸುತ್ತಿದ್ದಾರೆ. ಇದೇ ವೇಳೆ, ಈ ಪ್ರಕರಣದ ಪ್ರತ್ಯಕ್ಷಸಾಕ್ಷಿಗಳಾದ ನನ್ನ ದೇಶದ ಜನರು ತಮ್ಮ ಹೇಳಿಕೆಯನ್ನು ನೀಡಲು ಸಮನ್ಸ್ ನೀಡಲಾಗಿಲ್ಲ ಎಂದು ಪಾಕಿಸ್ತಾನಿ ಮಹಿಳೆಯೊಬ್ಬರ ಆರೋಪವನ್ನು ತಳ್ಳಿಹಾಕುವಂತೆ ಆರೋಪಿ ಸ್ವಾಮಿ ಅಸೀಮಾನಂದ್ ಪರ ವಕೀಲ ಮುಕೇಶ್ ಗರ್ಗ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪಾಕಿಸ್ತಾನಿ ಸಾಕ್ಷಿದಾರರಿಗೆ ಕನಿಷ್ಟ ಆರು ಬಾರಿ ಸಮನ್ಸ್ ಜಾರಿ ಮಾಡಲಾಗಿದ್ದರೂ ಅವರು ಯಾವುದೇ ಸ್ಪಂದನೆ ತೋರಿಲ್ಲ ಎಂದು ಗರ್ಗ್ ತಿಳಿಸಿದ್ದಾರೆ. ಸ್ಫೋಟ ಪ್ರಕರಣದ ಸಂತ್ರಸ್ತ ಮುಹಮ್ಮದ್ ವಕೀಲ್ ಪುತ್ರಿ, ಪಾಕಿಸ್ತಾನದ ಹಫೀಝಾಬಾದ್ ಗ್ರಾಮದ ನಿವಾಸಿ ರಹಿಲಾ ವಕೀಲ್, ತನ್ನ ದೇಶದ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುವಂತೆ ಸೋಮವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.