ಐಎಎಫ್ ಪೈಲೆಟ್ ಅಭಿನಂದನ್ ವರ್ಧಮಾನ್ ವಿಚಾರಣೆ
ಹೊಸದಿಲ್ಲಿ, ಮಾ. 14: ಕಳೆದ ತಿಂಗಳು ಪಾಕಿಸ್ತಾನದಿಂದ ಬಂಧಿತರಾಗಿ ಭಾರತಕ್ಕೆ ಹಿಂದಿರುಗಿದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ವಿಚಾರಣೆಯನ್ನು ಭಾರತೀಯ ವಾಯು ಪಡೆ ಹಾಗೂ ಇತರ ತನಿಖಾ ಸಂಸ್ಥೆಗಳು ಪೂರ್ಣಗೊಳಿಸಿವೆ. ಪ್ರಸ್ತುತ ಅಭಿನಂದನ್ ಕೆಲವು ವಾರಗಳ ಅನಾರೋಗ್ಯದ ರಜೆಯಲ್ಲಿ ತೆರಳಿದ್ದಾರೆ ಎಂದು ವಾಯು ಪಡೆಯ ಮೂಲಗಳು ತಿಳಿಸಿವೆ.
ಫೆಬ್ರವರಿ 27ರಂದು ಭಾರತೀಯ ವಾಯು ಪಡೆ ಹಾಗೂ ಪಾಕಿಸ್ತಾನದ ವಾಯು ಪಡೆ ನಡುವೆ ವೈಮಾನಿಕ ಸಂಘರ್ಷ ನಡೆದ ಸಂದರ್ಭ ಪತನಗೊಂಡ ವಿಮಾನದಿಂದ ಕೆಳಗೆ ಜಿಗಿದು 35ರ ಹರೆಯದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನ ಸೇನಾ ಪಡೆಯ ವಶಕ್ಕೆ ಒಳಗಾಗಿದ್ದರು. ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ನ ಸೇನಾ ವಾಹನದ ಮೇಲೆ ಪಾಕಿಸ್ತಾನ ಮೂಲದ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರ ಆತ್ಮಾಹುತಿ ದಾಳಿ ನಡೆಸಿ 40 ಯೋಧರ ಸಾವಿಗೆ ಕಾರಣವಾದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಆನಂತರ ಭಾರತೀಯ ವಾಯು ಪಡೆ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು.