ಭೋಪಾಲ ವಿಷಾನಿಲ ದುರಂತ ಸಾವು, ಅನಾರೋಗ್ಯದ ದತ್ತಾಂಶ ಪರಿಷ್ಕರಿಸಲು ಎನ್ಜಿಒ ಆಗ್ರಹ
ಭೋಪಾಲ್, ಮಾ. 14: ಭೋಪಾಲ ವಿಷಾನಿಲ ದುರಂತದಿಂದ ಸಾವನ್ನಪ್ಪಿದ ಹಾಗೂ ಅನಾರೋಗ್ಯಕ್ಕೀಡಾದವರ ದತ್ತಾಂಶವನ್ನು ಪರಿಷ್ಕರಿಸುವಂತೆ ಭೋಪಾಲ ಅನಿಲ ದುರಂತದ ಸಂತ್ರಸ್ತರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸರಕಾರೇತರ ಸಂಸ್ಥೆ (ಎನ್ಜಿಒ) ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಭೋಪಾಲದಲ್ಲಿ ವಿಷಾನಿಲ ಸೋರಿಕೆಯಿಂದ ಇಂದು ಕೂಡ ಸಾವು ಹಾಗೂ ರೋಗಗಳ ಬಗ್ಗೆ ವರದಿಯಾಗುತ್ತಿದೆ ಎಂದು ಇತ್ತೀಚೆಗಿನ ವೈಜ್ಞಾನಿಕ ಅಧ್ಯಯನ ಪ್ರತಿಪಾದಿಸಿದೆ ಎಂದು ಸರಕಾರೇತರ ಸಂಸ್ಥೆ ಹೇಳಿದೆ. ಜಗತ್ತಿನ ಅತಿ ದೊಡ್ಡ ಕೈಗಾರಿಕಾ ದುತವಾಗಿದ್ದ ಭೋಪಾಲ ವಿಷಾನಿಲ ದುರಂತದಲ್ಲಿ ನಗರದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್)ನ ಕೀಟನಾಶಕ ಘಟಕದಿಂದ 1984 ಡಿಸೆಂಬರ್ 2-3ರ ಮಧ್ಯರಾತ್ರಿ ಮೀಥೈಲ್ಐಸೋಸಿನೇಟ್ ಅನಿಲ ಸೋರಿಕೆಯಾಗಿತ್ತು. ಇದರಿಂದಾಗಿ ಸುಮಾರು 15 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.
5 ಲಕ್ಷಕ್ಕಿಂತಲೂ ಅಧಿಕ ಜನರು ಅನಾರೋಗ್ಯಕ್ಕೀಡಾಗಿದ್ದರು. ಮುಂದಿನ ತಿಂಗಳು ಸುಪ್ರೀಂ ಕೋರ್ಟ್ ಹೆಚ್ಚುವರಿ ಪರಿಹಾರದ ಮನವಿ ವಿಚಾರಣೆ ನಡೆಸುವ ಮುನ್ನ ವಿಷಾನಿಲ ದುರಂತದಿಂದ ಸಾವಿಗೀಡಾದ ಹಾಗೂ ಅನಾರೋಗ್ಯಕ್ಕೆ ತುತ್ತಾದವರ ಸಂಖ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಷ್ಕರಿಸುವಂತೆ ಎನ್ಜಿಒ ಆಗ್ರಹಿಸಿದೆ. ಸುಪ್ರೀಂ ಕೋರ್ಟ್ನ ಮುಂದೆ ಸಾವು ಹಾಗೂ ಅನಾರೋಗ್ಯಕ್ಕೆ ತುತ್ತಾದವರ ಸರಿಯಾದ ಸಂಖ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಲ್ಲಿಸದೇ ಇದ್ದರೆ, ಪ್ರತಿ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ನೀಡುವ ಕೆಲವು ತಂಡಗಳ ಭರವಸೆ ಈಡೇರದೇ ಇರಬಹುದು ಎಂದು ಎನ್ಜಿಒ ಹೇಳಿದೆ.