ಚಾಮರಾಜನಗರದಲ್ಲಿ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಪರದಾಡುತ್ತಿದೆ: ಶಾಸಕ ನರೇಂದ್ರ ರಾಜೂಗೌಡ
ಲೋಕಸಭೆ ಚುನಾವಣೆ
ಹನೂರು,ಮಾ.20: ಕಾಂಗ್ರೆಸ್ ಭದ್ರಕೋಟೆಯಾದ ಚಾಮರಾಜನಗರದಲ್ಲಿ ಅಭ್ಯರ್ಥಿಯನ್ನು ಆಯ್ಕೆಮಾಡಿ ಕಣಕ್ಕಿಳಿಸಲು ಬಿಜೆಪಿ ಪರದಾಡುತ್ತಿದೆ ಎಂದು ರಾಜ್ಯ ಆಹಾರ ಮತ್ತು ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಹನೂರು ಶಾಸಕ ನರೇಂದ್ರ ರಾಜೂಗೌಡ ಹೇಳಿದರು.
ಹನೂರಿನ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವ ಕಾಂಗ್ರೆಸ್ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕುಸ್ತಿ ಅಖಾಡದಲ್ಲಿ ಜಯಶೀಲರಾಗಲು ಸಮಾನ ತೂಕ ಮತ್ತು ಶಕ್ತಿಯ ಪೈಲ್ವಾನರ ಅವಶ್ಯಕತೆ ಇದೆ. ಆಗ ಮಾತ್ರ ಸಮಾನ ಹೋರಾಟ ನಿರೀಕ್ಷಿಸಲು ಸಾಧ್ಯ. 75 ಕೆಜಿ ತೂಕದ ಪೈಲ್ವಾನನ ಮುಂದೆ 25 ಕೆಜಿ ತೂಕದ ಪೈಲ್ವಾನನು ಹೋರಾಟಕ್ಕೆ ಇಳಿದಾಗ ಹೇಗೆ ತಾನೆ ಗೆಲ್ಲಲು ಸಾಧ್ಯ ಎಂದು ಪ್ರಶ್ನಿಸಿದರು.
ಕೆಲ ಲೋಕಸಭಾ ಸದಸ್ಯರು ಕ್ಷೇತ್ರದಲ್ಲಿ ಆರು ತಿಂಗಳಿಗೋ ವರ್ಷಕ್ಕೋ ಕಾಣಿಸಿಕೊಳ್ಳುತ್ತಾರೆ ಮತ್ತು ಹೆಚ್ಚಿನ ಸಮಯವನ್ನು ದಿಲ್ಲಿಯಲ್ಲಿ ಕಳೆಯುತ್ತಾರೆ. ಆದರೆ ದ್ರುವನಾರಾಯಣ್ ರವರು ಸಂಸತ್ತಿನ ಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ ಕ್ಷೇತ್ರದ ಜನರ ಕಷ್ಟ ಸುಖಕ್ಕೆ ಭಾಗಿಯಾಗಿ ಮಾದರಿ ಸಂಸದರಾಗಿದ್ದಾರೆ ಎಂದು ಹೇಳಿದರು.
ಕೇವಲ ಅನುಧಾನ ತಂದು ಜನರ ಕಷ್ಟ ಸುಖ ನೋಡದ ರಾಜಕಾರಿಣಿ ಯಾವುದೇ ಕಾರಣಕ್ಕೂ ಉತ್ತಮ ರಾಜಕಾರಣಿಯಾಗಲು ಸಾದ್ಯವಿಲ್ಲ. ಹನೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರರು ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿ ನಮ್ಮ ಅಭ್ಯರ್ಥಿಗೆ ಕಳೆದ ಬಾರಿಗಿಂತ ಹೆಚ್ಚಿನ ಅಂತರದ ಮತಗಳನ್ನು ಗಳಿಸಿಕೊಡಲು ಶ್ರಮಿಸುವಂತೆ ಕರೆ ನೀಡಿದರು.