ಕುವೈತ್ ಆರೋಗ್ಯ ಸೇವೆಗಳ ಪ್ರದರ್ಶನದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆ
ಕುವೈತ್: ಭಾರತೀಯ ರಾಯಭಾರ ಕಚೇರಿಯಿಂದ ನೀಡಲಾದ ಅಂತರ್ ರಾಷ್ಟ್ರೀಯ ವೇದಿಕೆಯಾದ 'ಕುವೈತ್ ಹೆಲ್ತ್ ಕೇರ್ ಎಕ್ಸ್ಪೋ 2019'ರಲ್ಲಿ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲಾ ಅವರ ನೇತೃತ್ವದಲ್ಲಿ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಭಾಗವಹಿಸಿತು.
ಭಾರತೀಯ ವೈದ್ಯರ ವೇದಿಕೆ (ಐಡಿಎಫ್), ಕುವೈತ್ ಮೆಡಿಕಲ್ ಅಸೋಸಿಯೇಶನ್ (ಕೆಎಂಎ), ಇಂಡಿಯನ್ ಬಿಸಿನೆಸ್ ಆ್ಯಂಡ್ ಪ್ರೊಫೆಷನಲ್ ಕೌನ್ಸಿಲ್ (ಐಬಿಪಿಸಿ) ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಇವರ ಸಹಯೋಗದೊಂದಿಗೆ ಕುವೈತ್ ಹೆಲ್ತ್ ಕೇರ್ ಎಕ್ಸ್ಪೋ 2019 ಅಯೋಜಿಸಲಾಗಿತ್ತು.
'ಬೆಸ್ಟ್ ಆಫ್ ಇಂಡಿಯನ್ ಹೆಲ್ತ್ ಕೇರ್ ಎಕ್ಸ್ಪೋ 2019' ಕುವೈತ್ ನ ರಾಡಿಸನ್ ಬ್ಲೂ ಹೋಟೇಲಿನಲ್ಲಿ ಮಾ.17 ಮತ್ತು 18ರಂದು ನಡೆಯಿತು. ಕುವೈತ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಅಹ್ಮದ್ ಅಲ್ ತುವೈನಿ, ಕುವೈತ್ ಭಾರತೀಯ ರಾಯಭಾರಿ ಕೆ. ಜೀವಸಾಗರ ಹಾಗೂ ಇತರ ರಾಜತಾಂತ್ರಿಕರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭವನ್ನು ಕುವೈತ್ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಡಾ. ಮುಸ್ತಫಾ ಮುಹಮ್ಮದ್ ಅಲ್ ರೆಧಾ ಅವರು ಉದ್ಘಾಟಿಸಿದರು.
ಈಗಾಗಲೇ ಎಜೆ ಆಸ್ಪತ್ರೆಯಲ್ಲಿ ಒಮನ್ ಹಾಗೂ ಯು.ಎ.ಇ. ರಾಷ್ಟ್ರದ ಪ್ರಜೆಗಳು ಚಿಕಿತ್ಸೆ ಪಡೆಯುತ್ತಿದ್ದು, ಕುವೈತ್ ಪ್ರಜೆಗಳು ಮುಂದಿನ ದಿನಗಳಲ್ಲಿ ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಅನೇಕ ರೋಗಿಗಳು ಮತ್ತು ಆರೋಗ್ಯ ಪ್ರವಾಸೋದ್ಯಮ ಕಂಪನಿಗಳು ಮಂಗಳೂರಿಗೆ ಆಗಮಿಸುವ ಆಸಕ್ತಿ ತೋರಿವೆ.
ಮಂಗಳೂರಿನ ಯಶಸ್ವಿ ಉದ್ಯಮಿ ಡಾ.ಎಜೆ ಶೆಟ್ಟಿಯವರಿಂದ 2001ರಲ್ಲಿ ಅರಂಭಿಸಿದ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಶ್ವ ದರ್ಜೆಯ ಆರೋಗ್ಯ ಸೇವೆ ನೀಡುತ್ತಾ ಬಂದಿದೆ ಹಾಗೂ ಸಮಗ್ರ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ನೀಡುವ ಕರಾವಳಿ ಪ್ರದೇಶದ ಏಕೈಕ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿದೆ.