ಪ್ರಧಾನಿಯ ಭೇಟಿಗೆ 1,500 ಕಿ.ಮೀ. ಪಾದಯಾತ್ರೆ ಹೊರಟಿದ್ದ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿ!
ಭುಬನೇಶ್ವರ್, ಮಾ.23: ಪ್ರಧಾನಿಯನ್ನು ಭೇಟಿಯಾಗಬೇಕೆಂಬ ಹಂಬಲದಿಂದ ಕಳೆದ ವರ್ಷ 71 ದಿನಗಳ ಅವಧಿಯಲ್ಲಿ 1,500 ಕಿ.ಮೀ.ಗೂ ಅಧಿಕ ದೂರ ಕ್ರಮಿಸಿ ಸುದ್ದಿಯಾಗಿದ್ದ ಒಡಿಶಾದ 31 ವರ್ಷದ ಮೂರ್ತಿ ತಯಾರಕ ಮುಕ್ತಿಕಂಠ ಬಿಸ್ವಾಲ್ ಎಂಬವರಿಗೆ ಈ ಬಾರಿ ಒಡಿಶಾ ವಿಧಾನಸಭಾ ಚುನಾವಣೆ ಸ್ಪರ್ಧಿಸಲು ರೂರ್ಕೆಲಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಸ್ವಾಲ್ ಹೆಸರಿದೆ.
ಕಳೆದ ವರ್ಷ ಪಾದಯಾತ್ರೆ ಹೊರಟಿದ್ದ ಬಿಸ್ವಾಲ್ ಒಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರೆ, ಇನ್ನೊಂದು ಕೈಯಲ್ಲಿ ರೂರ್ಕೆಲಾದ ಇಸ್ಪಾತ್ ಜನರಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆಯನ್ನು ಅವರಿಗೆ ನೆನಪಿಸುವ ಬ್ಯಾನರನ್ನು ಕೈಯ್ಯಲ್ಲಿ ಹಿಡಿದಿದ್ದರು.
ಆದರೆ ದಿಲ್ಲಿ ತಲುಪುವುದಕ್ಕಿಂತ ಮುಂಚೆಯೇ ಅವರು ಹೆದ್ದಾರಿಯಲ್ಲಿ ಕುಸಿದು ಬಿದ್ದು ನಂತರ ಅವರನ್ನು ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ನಂತರ ಅವರು ದಿಲ್ಲಿ ತಲುಪಿದ್ದರೂ ಪ್ರಧಾನಿಯನ್ನು ಭೇಟಿಯಾಗುವುದು ಸಾಧ್ಯವಾಗಿರಲಿಲ್ಲ. ಇದೀಗ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.