ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ
ಬೆಂಗಳೂರು, ಮಾ.23: ಸಿನಿಮಾ ನಟ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ಇಲ್ಲಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ಬೆಳಗಿನ ಜಾವ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಇದರಿಂದ ಕಾರಿನ ಗಾಜು ಜಖಂಗೊಂಡಿದೆ.
ಈ ಸಂಬಂಧ ದರ್ಶನ್ ಅವರ ವ್ಯವಸ್ಥಾಪಕ ಶ್ರೀನಿವಾಸ ಅವರು ಪೊಲೀಸರಿಗೆ ದೂರು ನೀಡಿದ್ದು, ಇದರ ಅನ್ವಯ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಹಾಗೂ ಕೆಂಗೇರಿ ಗೇಟ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಬಗ್ಗೆ ಅವರ ಮನೆಯ ಸಿಸಿ ಟಿವಿ ದೃಶ್ಯಾವಳಿ ಹಾಗೂ ರಸ್ತೆ ಬದಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಮಧ್ಯರಾತ್ರಿ ಒಬ್ಬ ದುಷ್ಕರ್ಮಿ ಮನೆಗೆ ಬಂದು ಕಲ್ಲು ತೂರಿ ಓಡಿ ಹೋಗಿದ್ದಾನೆ. ಆತನನ್ನು ನೋಡುವಷ್ಟರಲ್ಲಿಯೇ ಆತ ಓಡಿ ಹೋದ.
-ಕೆಂಪೇಗೌಡ, ದರ್ಶನ್ ಮನೆಯ ಭದ್ರತಾ ಸಿಬ್ಬಂದಿ