ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ರ ಪತ್ನಿ ನಿಧನ
ಬೆಂಗಳೂರು, ಮಾ.23: ದೇಶ ವಿದೇಶಗಳಲ್ಲಿ ನಿತ್ಯೋತ್ಸವ ಕವಿಯೆಂದೆ ಖ್ಯಾತರಾದ ಕನ್ನಡದ ಖ್ಯಾತ ಕವಿ, ಸಾಹಿತಿ, ಪದ್ಮಶ್ರೀ ಡಾ.ಕೆ.ಎಸ್.ನಿಸಾರ್ ಅಹ್ಮದ್ ಅವರ ಪತ್ನಿ ಶಾನವಾಝ್ ಬೇಗಮ್(77) ಶನಿವಾರ ಬೆಳಗ್ಗೆ ಬೆಂಗಳೂರಿನ ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತಿಚೆಗೆ ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಶಾನವಾಝ್ ಬೇಗಮ್, ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 15 ದಿನಗಳ ಹಿಂದೆ ಬನಶಂಕರಿಯ ಯೋಗಾನಂದ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಶಾನವಾಝ್ ಬೇಗಮ್, 16 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಅವರಿಗೆ 4 ಜನ ಮಕ್ಕಳಿದ್ದು ಇಬ್ಬರು ಮಕ್ಕಳು ಅಮೇರಿಕದಲ್ಲಿದ್ದಾರೆ.
ಮೃತರ ಅಂತ್ಯಕ್ರಿಯೆ ರವಿವಾರ ಮಧ್ಯಾಹ್ನ 2 ಗಂಟೆಗೆ ನಗರದ ಖುದ್ದೂಸ್ ಸಾಹೇಬ್ ಖಬರಸ್ಥಾನ್ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನನ್ನ ಎಲ್ಲ ಬರಹಗಳಿಗೆ ಪ್ರಾರಂಭದಿಂದಲೂ ನನ್ನ ಪತ್ನಿ ಸ್ಫೂರ್ತಿದಾಯಕವಾಗಿದ್ದರು. ನನ್ನ ಸಾಹಿತ್ಯ ಸೇವೆಗೆ ನನ್ನ ಪತ್ನಿಯ ಕೊಡುಗೆಯನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರ ಉಳಿವಿಗಾಗಿ ನಾನು ಸಾಕಷ್ಟು ಹೋರಾಡಿದೆ. ಆದರೂ, ದೇವರು ತನ್ನತ್ತ ಕರೆದುಕೊಂಡುಬಿಟ್ಟ.
-ಡಾ.ಕೆ.ಎಸ್.ನಿಸಾರ್ ಅಹ್ಮದ್, ಕವಿ