ಐ.ಎಸ್.ಎಫ್. ಮದೀನಾ ವತಿಯಿಂದ ‘ಪ್ರಸಕ್ತ ರಾಜಕೀಯ ಮತ್ತು ಮುಸ್ಲಿಮರು’ ಸಾರ್ವಜನಿಕ ಕಾರ್ಯಕ್ರಮ
ಮದೀನಾ(ಸೌದಿ ಅರೇಬಿಯಾ), ಎ.13: ಇಂಡಿಯನ್ ಸೋಶಿಯಲ್ ಫೋರಂ(ಐ.ಎಸ್.ಎಫ್.) ಕರ್ನಾಟಕ ಚಾಪ್ಟರ್ ಮದೀನಾ ಮುನವ್ವರ ಸಮಿತಿಯ ವತಿಯಿಂದ ಅನಿವಾಸಿ ಕನ್ನಡಿಗರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ‘ಪ್ರಸಕ್ತ ರಾಜಕೀಯ ಮತ್ತು ಮುಸ್ಲಿಮರು’ ಎಂಬ ಸಾರ್ವಜನಿಕ ಕಾರ್ಯಕ್ರಮ ಮದೀನಾದಲ್ಲಿ ನಡೆಯಿತು.
ಐ.ಎಸ್.ಎಫ್. ಮದೀನಾ ಮುನವ್ವರ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಇಲ್ಯಾಸ್ ಗುರುಪುರ ಸಭಾಧ್ಯಕ್ಷತೆ ವಹಿಸಿದ್ದರು. ಹಾಪಿಳ್ ಇಲ್ಯಾಸ್ ಅಲ್ ಖಾಸಿಮಿ ದುಆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಐ.ಎಸ್.ಎಫ್. ಮದೀನಾ ಕೇರಳ ಘಟಕ ವೆಲ್ಫೇರ್ ಚೇರ್ಮೆನ್ ಅಶ್ರಫ್ ಚೋಕ್ಲಿ ಇಂಡಿಯನ್ ಸೋಷಿಯಲ್ ಫೋರಂನ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಐ.ಎಸ್.ಎಫ್. ಜಿಲ್ಲಾ ಸಮಿತಿಯ ಸದಸ್ಯ ಅಬ್ದುಲ್ ಮಜೀದ್ ವಿಟ್ಲ ಮಾತನಾಡುತ್ತಾ ದೇಶದಲ್ಲಿ ಮುಸ್ಲಿಮರ ಪರಿಸ್ಥಿತಿಯು ದಲಿತರಿಗಿಂತಲೂ ಹೀನಾಯವಾಗಿದೆ ಎಂದು ಸಾಚಾರ್ ಕಮಿಷನ್ ವರದಿ ಮಾಡಿದೆ. ನಮ್ಮ ಮತಗಳನ್ನು ಪಡೆದ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ನಮ್ಮ ಹಕ್ಕುಗಳ ಬಗ್ಗೆ ಲೋಕಸಭೆ, ಶಾಸನ ಸಭೆಗಳಲ್ಲಿ ಮಾತನಾಡುತ್ತಿಲ್ಲ. ಆದ್ದರಿಂದ ನಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡುವ ಮೂಲಕ ನಾವು ರಾಜಕೀಯ ಅಧಿಕಾರ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಐ.ಎಸ್.ಎಫ್. ಮದೀನಾ ತಮಿಳುನಾಡು ಘಟಕ ಅಧ್ಯಕ್ಷ ಅಬ್ಬುಲ್ಲಾ, ಇಂಡಿಯಾ ಫ್ರಟರ್ನಿಟಿ ಫೋರಮ್ ಮದೀನಾ ವಲಯಾಧ್ಯಕ್ಷ ಕಬೀರ್ ಮಾಸ್ಟರ್ ಉಪಸ್ಥಿತರಿದ್ದರು.
ಹಬೀಬ್ ಅಳಕೆ ಸ್ವಾಗತಿಸಿ, ಅಬ್ದುಲ್ ಅಝೀಝ್ ಸುರಿಬೈಲ್ ಕಾರ್ಯಕ್ರಮ ನಿರೂಪಿಸಿದರು. ಅಝೀಝ್ ಅಳಕೆಮಜಲು ವಂದಿಸಿದರು.