54 ವಿದ್ಯಾರ್ಥಿಗಳು ಅರ್ಹತಾ ವಿದ್ಯಾರ್ಥಿ ವೇತನಕ್ಕೆ ಆಯ್ಕೆ
ಬೆಂಗಳೂರು, ಎ.17: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಪ್ರೌಢಶಾಲೆಯ 8 ನೆ ತರಗತಿಯ 54 ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯದಿಂದ ನೀಡುವ ಸ್ಕಾಲರ್ಶಿಪ್ ಇದಾಗಿದ್ದು, ಮಂಡ್ಯ ಜಿಲ್ಲೆಯಿಂದಲೇ ಇವರೂ ಸೇರಿದಂತೆ 117 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಆದರೆ ಇಲ್ಲಿನ ಮ್ಕಕಳ ಕಲಿಕೆಯ ಉತ್ಸಾಹವನ್ನು ಸೌಲಭ್ಯದ ಕೊರತೆ ಯಾವುದರಲ್ಲಿಯೂ ಹಿಂದುಳಿದಿಲ್ಲ ಎಂದು ನಿರೂಪಿಸಿದ್ದಾರೆ.
ಈ ಸರಕಾರಿ ಪ್ರೌಢಶಾಲೆಗೆ ಕಳೆದ ಶೈಕ್ಷಣಿಕ ಸಾಲಿನಲ್ಲಿ 151 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅವರಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 54 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಎನ್ಎಂಎಂಎಸ್ ರಾಷ್ಟ್ರಮಟ್ಟದ ಪ್ರತಿಭಾ ಶೋಧ ಪರೀಕ್ಷೆಯಾಗಿದ್ದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಪ್ರತಿವರ್ಷ ನಡೆಸುತ್ತದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ವರ್ಷಕ್ಕೆ 12 ಸಾವಿರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಅದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸುವವರೆಗೆ ಅನ್ವಯವಾಗುತ್ತದೆ. ಸ್ಕಾಲರ್ಶಿಪ್ಗೆ ಆಯ್ಕೆಯಾದವರು ಮುಂದಿನ ತರಗತಿಗಳಲ್ಲಿ ಕನಿಷ್ಠ ಶೇ.60ರವರೆಗೆ ತೇರ್ಗಡೆ ಹೊಂದಬೇಕು.