ಸಾಗರದಲ್ಲಿ ಬಸ್ ಪಲ್ಟಿ: ತಾಯಿ, ಮಗಳು ಸಹಿತ ಮೂವರು ಮೃತ್ಯು
ಸಾಗರ: ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಸಾಗರ ತಾಲೂಕಿನ ಉಳ್ಳೂರು ಬಳಿ ನಿನ್ನೆ ತಡ ರಾತ್ರಿ ಪಲ್ಟಿಯಾಗಿದ್ದು, ಪರಿಣಾಮ ಮೂವರು ಮೃತಪಟ್ಟು 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ.
ಮೃತರನ್ನು ಹೊನ್ನಾವರ ನಿವಾಸಿಗಳಾದ ಕೀರ್ತನಾ (12), ಸುಜಾತ (40) ಮಹಮದ್ ಯಾಸಿನ್ ಬಿನ್ ಬಾಬು(16) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಾಗರ ಉಪವಿಭಾಗೀಯ ಆಸ್ಪತ್ರೆ ಹಾಗೂ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆರವಿಗೆ ಧಾವಿಸಿದ ಸೋಶಿಯಲ್ ಮೂಮೆಂಟ್
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರದ ಕರ್ನಾಟಕ ಸೋಶಿಯಲ್ ಮೂಮೆಂಟ್ ಸಂಘಟನೆ ಬಸ್ಸಿನ ಒಳಗೆ ಸಿಕ್ಕಿ ಹಾಕಿಕೊಂಡ ಎಲ್ಲರನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ಬಸ್ ಪಲ್ಟಿಯಾಗಿದ್ದರಿಂದ ಮುಖ್ಯ ರಸ್ತೆ ಸಂಪೂರ್ಣ ಬಂದಾಗಿತ್ತು. ಜೆಸಿಬಿ, ಕ್ರೇನ್ ಮೂಲಕ ಬಸ್ಸನ್ನು ನಿಲ್ಲಿಸಿ, ರಸ್ತೆಯಿಂದ ಬದಿಗೆ ಸರಿಸಿ ಸಂಚಾರ ಮುಕ್ತಗೊಳಿಸಿದರು. ಬಸ್ಸಿನೊಳಗಿದ್ದ ಬೆಲೆಬಾಳುವ ಬಂಗಾರದ ಆಭರಣದ ಬ್ಯಾಗ್ ಗಳನ್ನು ಪೋಲಿಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಿದರು.
ಸಂಘದ ಫಯಾಝ್, ಸಮೀರ್, ಸಫ್ವಾನ್, ತೌಸಿಫ್ ಪ್ರಮುಖವಾಗಿ ರಕ್ಷಣಾ ಕಾರ್ಯದಲ್ಲಿದ್ದರು.