ಶಿವಸೇನೆಗೆ ಸೇರ್ಪಡೆಯಾದ ಪ್ರಿಯಾಂಕಾ ಚತುರ್ವೇದಿ
ಹೊಸದಿಲ್ಲಿ, ಎ.19: ಎರಡು ದಿನಗಳ ಹಿಂದೆ ಟ್ವಿಟರ್ನಲ್ಲಿ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಗುರುವಾರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.
ಪ್ರಿಯಾಂಕಾ ರಾಜೀನಾಮೆ ನೀಡಿದ ಬೆನ್ನಿಗೇ ಟ್ವೀಟ್ ಮಾಡಿದ ಶಿವಸೇನೆಯ ಸಂಸದ ಸಂಜಯ್ ರಾವತ್, ಮುಂಬೈ ಮೂಲದ ಕಾಂಗ್ರೆಸ್ನ ಮಾಜಿ ವಕ್ತಾರೆ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದಿದ್ದರು.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ,‘‘ಶಿವಸೇನೆ ತನ್ನ ಕುಟುಂಬ ಸದಸ್ಯೆಯನ್ನಾಗಿ ತನ್ನನ್ನು ಸೇರಿಸಿಕೊಂಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಉದ್ಧವ್ಜಿ ಹಾಗೂ ಆದಿತ್ಯಜಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದರು.
‘‘ಪ್ರಿಯಾಂಕಾರನ್ನು ಪರಿಚಯಿಸುವ ಅಗತ್ಯವಿಲ್ಲ. ಅವರು ತನ್ನ ಪಕ್ಷವನ್ನು ಆತ್ಮವಿಶ್ವಾಸದಿಂದ ಸಮರ್ಥಿಸಿಕೊಳ್ಳುತ್ತಾರೆ. ಶಿವಸೇನೆ ತನ್ನ ಉತ್ತಮ ಆಯ್ಕೆ ಎಂದು ಅವರು ಭಾವಿಸಿದ್ದಾರೆ. ಅವರನ್ನು ನಾನು ಸೇನೆಯ ಪರಿವಾರಕ್ಕೆ ಸ್ವಾಗತಿಸುತ್ತೇನೆ’’ ಎಂದು ಠಾಕ್ರೆ ಹೇಳಿದ್ದಾರೆ.