ಶ್ರೀನಿವಾಸ ಭಂಡಾರಿ
ಬಂಟ್ವಾಳ, ಎ. 22: ವೇದಿಕೆ ಅಲಂಕಾರ ನಿಪುಣ, ಸರಪಾಡಿ ಗ್ರಾಮದ ಮುನ್ನಲಾಯಿ ನಿವಾಸಿ ಜೆಪ್ಪು ಕೊಪ್ಪರಿಗೆಗುತ್ತು ಜೆ. ಶ್ರೀನಿವಾಸ ಭಂಡಾರಿ (71) ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವರು ಉತ್ತಮ ಸಂಘಟಕರಾಗಿ ವಿವಿಧ ಧಾರ್ಮಿಕ, ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ಸ್ನೇಹ ಜೀವಿಯಾಗಿ ಜನಾನುರಾಗಿಯಾಗಿದ್ದರು.
ಅವರು ಬಂಟರ ಸಂಘದ ಸರಪಾಡಿ ವಲಯದ ಅಧ್ಯಕ್ಷರಾಗಿ ಕ್ರೀಡಾಕೂಟ ಸಂಘಟಿಸಿ, ಕಲಾವಿದರನ್ನು ಸಮ್ಮಾನಿಸಿದ್ದರು. ಮುನ್ನಲಾಯಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಸ್ಥಾಪಿಸಿ ಹಲವಾರು ವರ್ಷಗಳಿಂದ ಮೊಸರುಕುಡಿಕೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸುತ್ತಿದ್ದರು. ಮುನ್ನಲಾಯಿ ಶ್ರೀ ಮಹಮ್ಮಾಯಿ ಮಂದಿರ, ಪೆರಿಯಪಾದೆ ಶ್ರೀ ದುಗಲಾಯ ದೈವಸ್ಥಾನಗಳ ಅಧ್ಯಕ್ಷರಾಗಿದ್ದರು. ತ್ರೋ ಬಾಲ್, ಹಗ್ಗ ಜಗ್ಗಾಟ ತಂಡಗಳ ನೇತೃತ್ವ ವಹಿಸಿದ್ದರು.
ವಿವಾಹ ಮೊದಲಾದ ಕಾರ್ಯಕ್ರಮಗಳಿಗೆ ವೇದಿಕೆ ಅಲಂಕಾರ, ಪುಷ್ಪಾಲಂಕಾರ ನಡೆಸುತ್ತಿದ್ದರು. ವೇದಿಕೆ ಅಲಂಕಾರಕ್ಕಾಗಿ ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಪುರಸ್ಕಾರ ಪಡೆದಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸಹಿತ ಗಣ್ಯರು ಮೃತರ ಅಂತಿಮದರ್ಶನ ಪಡೆದರು.