ವಿಭಜನೆ, ನಕಾರತ್ಮಕ ರಾಜಕಾರಣ ಅಳಿಸಲು ನೆರವು ನೀಡಿ: ಪ್ರಿಯಾಂಕಾ ಗಾಂಧಿ ವಾದ್ರಾ
ಫತೇಹ್ಪುರ್, ಎ. 24: ವಿಭಜನೆ ಹಾಗೂ ನಕಾರಾತ್ಮಕ ರಾಜಕಾರಣ ಅಳಿಸಲು ನೆರವು ನೀಡಿ. ಮುಂದಿನ ಜನಾಂಗದ ಬಗ್ಗೆ ಚಿಂತಿಸಿ ಹಾಗೂ ದೇಶ ರಕ್ಷಿಸಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಹೇಳಿದ್ದಾರೆ.
''ರಾಜಕಾರಣ ಬದಲಾಯಿಸಿ, ನಿಮ್ಮ ಪ್ರದೇಶ ಅಥವಾ ನಿಮ್ಮ ಅಗತ್ಯಗಳಿಗಾಗಿ ಮಾತ್ರವಲ್ಲ. ಬದಲಾಗಿ, ನಿಮ್ಮ ಮುಂದಿನ ಜನಾಂಗ ಹಾಗೂ ಅಪಾಯದಲ್ಲಿರುವ ದೇಶವನ್ನು ರಕ್ಷಿಸಲು'' ಎಂದು ಅವರು ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ತಿಳಿಸಿದರು.
ವಿಭಜನೀಯ ಹಾಗೂ ನಕಾರಾತ್ಮಕ ರಾಜಕೀಯ ಅಳಿಸಿ. ನಿಮ್ಮ ದುಃಖದ ಬಗ್ಗೆ ಹಾಗೂ ಅವುಗಳನ್ನು ಪರಿಹರಿಸುವ ಪ್ರಯತ್ನದ ಬಗ್ಗೆ ಮಾತನಾಡುವ ರಾಜಕೀಯದಲ್ಲಿ ಪಾಲ್ಗೊಳ್ಳಿ ಎಂದು ಅವರು ಹೇಳಿದರು. ''ನೀವೆಲ್ಲರೂ ಮತ ಹಾಕುವ ಹಕ್ಕು ಪಡೆದಿದ್ದೀರಿ. ಇದು ಪ್ರಜಾಪ್ರಭುತ್ವದಲ್ಲಿ ಅತಿ ದೊಡ್ಡ ಶಕ್ತಿ. ಈ ಶಕ್ತಿಗಿಂತ ದೊಡ್ಡ ಶಕ್ತಿ ಬೇರೆ ಇಲ್ಲ. ಮತ ನಿಮ್ಮ ಹಕ್ಕು ಹಾಗೂ ಆಯುಧ. ಈ ಆಯುಧವನ್ನು ನೀವು ವಿವೇಚನೆಯಿಂದ ಬಳಸಬೇಕು'' ಎಂದು ಅವರು ತಿಳಿಸಿದರು. ಸುಳ್ಳು ಮಾತನಾಡುವ ಹಾಗೂ ನಿಮಗಾಗಿ ಕೆಲಸ ಮಾಡದ ವ್ಯಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು. ಫತೇಪುರದಲ್ಲಿ ಮೇ 6ರಂದು 5ನೇ ಹಂತದ ಮತದಾನ ನಡೆಯಲಿದೆ.