ರಾಷ್ಟ್ರದ್ರೋಹಿ ಎಂದು ಕರೆದಿರುವುದು ನನ್ನನ್ನು ಮಾತ್ರ ಅಲ್ಲ: ಕನ್ಹಯ್ಯಾ ಕುಮಾರ್
ಪಾಟ್ನಾ, ಎ. 25: "ಅವರು ದೇಶದ್ರೋಹಿ ಎಂದು ಅವಮಾನಿಸಿರುವುದು ನನ್ನನ್ನು ಮಾತ್ರವಲ್ಲ; ಹೀಗೆ ಅವಮಾನಕ್ಕೊಳಗಾದವರ ಗೌರವಾರ್ಥವಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ" ಎಂದು ಬೆಗುಸರಾಯ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಜೆಎನ್ಯು ಮುಖಂಡ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.
ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಕೈಗೊಳ್ಳುವ ಮಧ್ಯೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಅವರು ನನ್ನನ್ನು ಅವಮಾನಿಸಿದರು. ಕೇವಲ ನನ್ನನ್ನು ಮಾತ್ರ ರಾಷ್ಟ್ರದ್ರೋಹಿ ಎಂದು ಕರೆದು ಅವಮಾನಿಸಿದ್ದಲ್ಲ; ಬಿಹಾರದ ಈ ಇಡೀ ಜಿಲ್ಲೆಯನ್ನು ಹಾಗೆ ಕರೆದಿದ್ದಾರೆ. "ದೇಶದ್ರೋಹಿ ಬಿಹಾರಿ" ಎಂದು ಕರೆಸಿಕೊಂಡಿರುವ ಬಿಹಾರದ ಪ್ರತಿಯೊಬ್ಬರಿಗಾಗಿ ನಾನು ಹೋರಾಡುತ್ತೇನೆ" ಎಂದು ಬಣ್ಣಿಸಿದರು.
ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಬಗ್ಗೆ ನಿಮಗೆ ಒತ್ತಡ ಇಲ್ಲವೇ ಎಂದು ಕೇಳಿದ ಪ್ರಶ್ನೆಗೆ, "ನಾನೇಕೆ ಒತ್ತಡ ಎದುರಿಸಬೇಕು ? ಒತ್ತಡ ಅವರು ಎದುರಿಸಬೇಕು. ನಾನು ಹಾಲಿ ಸಂಸದ ಅಲ್ಲ; ನನಗೆ ಹುದ್ದೆ ಕಳೆದುಕೊಳ್ಳುವ ಭಯ ಇಲ್ಲ; ನಾನು ಕಳೆದುಕೊಳ್ಳುವಂಥದ್ದೇನೂ ಇಲ್ಲ" ಎಂದು ಉತ್ತರಿಸಿದರು.
ಅವರ ಗೆಲುವಿನ ಸಾಧ್ಯತೆ ಬಗ್ಗೆ ಕೇಳಿದಾಗ "ಟಾಮ್ ಆ್ಯಂಡ್ ಜೆರ್ರಿ ಹೋರಾಟದಲ್ಲಿ ಗೆಲ್ಲುವುದು ಸರಾ ಜೆರ್ರಿ. ಟಾಮ್ ಬಲಾಢ್ಯ ಇರಬಹುದು. ಆದರೆ ಅದು ಇನ್ನೂ ಬಿಲ್ಲಾ (ಕಳ್ಳಬೆಕ್ಕು) ಎಂದು ಹೇಳಿದರು.
ಮಹಾಮೈತ್ರಿಕೂಟದ ಅಭ್ಯರ್ಥಿಯಾಗಿ ನಿಮ್ಮನ್ನು ಕಣಕ್ಕೆ ಇಳಿಸುವಂತೆ ಲಾಲೂ ಅವರನ್ನು ಮನವೊಲಿಸಲು ನಿಮಗೆ ಅಥವಾ ಸಿಪಿಐಗೆ ಏಕೆ ಸಾಧ್ಯವಾಗಿಲ್ಲ ಎಂದು ಕೇಳಿದಾಗ, ಲಾಲೂ ಅವರನ್ನು ನಾವು ಭೇಟಿ ಮಾಡಿದ್ದರೆ, ಈ ಬಗ್ಗೆ ಮಾತನಾಡಬಹುದಿತ್ತು ಎಂದು ಪ್ರತಿಕ್ರಿಯಿಸಿದರು.