‘ಉಜ್ವಲ’ ಯೋಜನೆಯ ಪ್ರಪ್ರಥಮ ಫಲಾನುಭವಿಗೆ ಬೆರಣಿಯೇ ಇಂಧನ!
ಬಿಜೆಪಿಯ ‘ಪ್ರಮುಖ ಸಾಧನೆ’ಯ ವಾಸ್ತವಾಂಶ ಬಿಚ್ಚಿಡುತ್ತಾರೆ ಗುಡ್ಡಿದೇವಿ
ಗ್ರಾಮೀಣ ಮಹಿಳೆಯರಿಗೆ ನೆರವಾಗುವ ಉದ್ದೇಶದೊಂದಿಗೆ 2016ರಲ್ಲಿ ಪ್ರಧಾನಿ ಮೋದಿ ‘ಉಜ್ವಲ’ ಯೋಜನೆಯನ್ನು ಜಾರಿಗೆ ತಂದಿದ್ದರು. ಗ್ರಾಮೀಣ ಮಹಿಳೆಯರು ಒಲೆಗಳಿಂದ ಮುಕ್ತಿ ಹೊಂದಿ ಅಡುಗೆ ಅನಿಲ ಬಳಸುವಂತಾಗಬೇಕು ಎಂದು ಪ್ರಧಾನಿ ಅಂದು ಹೇಳಿದ್ದರು. ಬಿಜೆಪಿ ಪ್ರಚಾರಗಳಲ್ಲಿ, ಪ್ರಧಾನಿ ಮೋದಿಯವರ ಚುನಾವಣಾ ರ್ಯಾಲಿಗಳಲ್ಲಿ ‘ಉಜ್ವಲ’ ಯೋಜನೆಯ ‘ಸಾಧನೆ’ಯ ಬಗ್ಗೆ ಹೇಳಿಕೊಳ್ಳಲಾಗುತ್ತದೆ. ಆದರೆ ಯೋಜನೆಯ ಪ್ರಪ್ರಥಮ ಫಲಾನುಭವಿಯಾದ ಗುಡ್ಡಿದೇವಿಯವರು ಹೇಳುವ ಕಥೆ ಬೇರೆಯದೇ ರೀತಿಯಿದೆ ಎಂದು bbc.com ವರದಿ ಮಾಡಿದೆ.
2016ರಲ್ಲಿ ಜಾರಿಗೆ ಬಂದ ಈ ಯೋಜನೆಯ ಪ್ರಪ್ರಥಮ ಫಲಾನುಭವಿಯಾಗಿದ್ದರು ಗುಡ್ಡಿದೇವಿ. ಸ್ವತಃ ಪ್ರಧಾನಿ ಮೋದಿಯವರೇ ಗುಡ್ಡಿದೇವಿಯವರಿಗೆ ಸೌಲಭ್ಯವನ್ನು ಹಸ್ತಾಂತರಿಸಿದ್ದರು. ಆದರೆ ಇಂದು ಗುಡ್ಡಿದೇವಿಯವರು ಮನೆಯ ಒಲೆ ಉರಿಸುವುದಕ್ಕಾಗಿ ಬೆರಣಿಯನ್ನೇ ಅವಲಂಬಿಸಿದ್ದಾರೆ.
“ಇದು ಬಹಳ ತ್ರಾಸದಾಯಕ ಕೆಲಸ. ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ” ಎಂದು ಗುಡ್ಡಿ ದೇವಿ ಹೇಳುತ್ತಾರೆ. ಉಜ್ವಲ ಯೋಜನೆಯ ಫಲಾನುಭವಿಗಳು ವರ್ಷಕ್ಕೆ 12 ಸಬ್ಸಿಡಿಯುಕ್ತ ಸಿಲಿಂಡರ್ ಗಳನ್ನು ಪಡೆಯುತ್ತಾರೆ. ಆದರೆ ಗುಡ್ಡಿದೇವಿಯವರಿಗೆ 3 ವರ್ಷಗಳಲ್ಲಿ 11 ಸಿಲಿಂಡರ್ ಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.
“ಸಿಲಿಂಡರ್ ಕೊಳ್ಳಲು ಹಣಕ್ಕಾಗಿ ನಾನು ಎಲ್ಲಿಗೆ ಹೋಗಲಿ?, ಮೊದಲು ಗ್ಯಾಸ್ ಸಂಪರ್ಕವಿದ್ದಾಗ ಒಂದು ಸಿಲಿಂಡರ್ ಗೆ 520 ರೂ. ಇತ್ತು. ಈಗ 770 ರೂ. ಆಗಿದೆ” ಎನ್ನುತ್ತಾರೆ ಗುಡ್ಡಿ ದೇವಿ.
“ಉಜ್ವಲ ಯೋಜನೆಯ ಶೇ.30ರಷ್ಟು ಫಲಾನುಭವಿಗಳು ಮಾತ್ರ ರಿಫಿಲ್ ಗಾಗಿ ಆಗಮಿಸುತ್ತಾರೆ” ಎಂದು ಗ್ಯಾಸ್ ಏಜೆನ್ಸಿ ಮಾಲಕ ಅಖಿಲೇಶ್ ಗುಪ್ತಾ ಹೇಳುತ್ತಾರೆ.
ಬಿಜೆಪಿ ತನ್ನ ಜಾಹೀರಾತುಗಳಲ್ಲಿ, ಪ್ರಚಾರಗಳಲ್ಲಿ ಗುಡ್ಡಿದೇವಿಯವರ ಫೋಟೊಗಳನ್ನು ಬಳಸಿ, ಪ್ರಧಾನಿ ಮೋದಿ ಜಾರಿಗೆ ತಂದ ಉಜ್ವಲ ಯೋಜನೆ ಫಲಾನುಭವಿ ಎಂದು ಪ್ರಚಾರ ಮಾಡುತ್ತಿದೆ. ಆದರೆ ಗುಡ್ಡಿ ದೇವಿಯವರು ಮಾತ್ರ ಬೇರೆಯದೇ ಕಥೆ ಹೇಳುತ್ತಾರೆ.
ಕೃಪೆ: www.bbc.com