ಶಿವಮೊಗ್ಗ: 7 ನೇ ತರಗತಿ ವಿದ್ಯಾರ್ಥಿನಿ ವಿವಾಹ ಬೆಳಕಿಗೆ; ಬಾಲಕಿಯ ರಕ್ಷಣೆ
ಮಕ್ಕಳ ರಕ್ಷಣಾಧಿಕಾರಿ ಮಾಹಿತಿ
ಶಿವಮೊಗ್ಗ, ಮೇ 15: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೆಚ್.ಕೆ ಜಂಕ್ಷನ್ ಗ್ರಾಮದಲ್ಲಿ 14 ವರ್ಷದ ಏಳನೇ ತರಗತಿ ಬಾಲಕಿಗೆ ಬಾಲ್ಯವಿವಾಹ ನಡೆಸಿದ್ದು ಬೆಳಕಿಗೆ ಬಂದಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಮಾಹಿತಿಯ ಮೇರೆಗೆ ಶಾಲಾ ಶಿಕ್ಷಕರು, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯನ್ನು ರಕ್ಷಿಸಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸಿದ್ದಾರೆ.
ಬಾಲಕಿಯು ಗ್ರಾಮದ ಸರೋಜಮ್ಮ ಹಾಗೂ ಮಲ್ಲೇಶಪ್ಪರ ಮಗಳೆಂದು ತಿಳಿದು ಬಂದಿದೆ. ದಂಪತಿಯು ಜಗದೀಶ್ ಎಂಬುವರ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಬಾಲಕಿಯ ವಿವಾಹ ನಡೆದಿತ್ತು ಎನ್ನಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮಾಹಿತಿ ಬಂದಿದ್ದು, ಅವರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಶಾಲಾ ಶಿಕ್ಷಕರು, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಭೇಟಿಯಿತ್ತು ಪರಿಶೀಲಿಸಿದ್ದರು.
ಈ ವೇಳೆ ವಿವಾಹ ನಡೆದಿರುವುದು ದೃಢಪಟ್ಟ ಕಾರಣ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತಂದು ಸಮಾಲೋಚನೆ ನಡೆಸಲಾಗಿದೆ. ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.