ಕಾಂಗ್ರೆಸ್ಗೆ ಮತ ಚಲಾಯಿಸಿದ ಸಂಬಂಧಿಗೆ ಗುಂಡಿಕ್ಕಿದ ಬಿಜೆಪಿ ಕಾರ್ಯಕರ್ತ
ಚಂಡೀಗಢ, ಮೇ 15:ಮೇ 12ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ತನ್ನ ಸೋದರ ಸಂಬಂಧಿ ಕಾಂಗ್ರೆಸ್ಗೆ ಮತ ಚಲಾಯಿಸಿದ್ದಾನೆ ಎಂಬ ಸಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಆತನ ಮೇಲೆ ಗುಂಡು ಹಾರಿಸಿದ ಪ್ರಕರಣ ವರದಿಯಾಗಿದೆ.
ಝಜ್ಜಾರ್ ಎಂಬಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಮೇ 12ರಂದು ಮತದಾನೋತ್ತರ ಘರ್ಷಣೆ ನಡೆದಿದ್ದು, ಈ ಸಂದರ್ಭ ಬಿಜೆಪಿ ಕಾರ್ಯಕರ್ತ ಧರ್ಮೇಂದರ್ ಎಂಬಾತ ಕಾಂಗ್ರೆಸ್ಗೆ ಮತ ಚಲಾಯಿಸಿದ ತನ್ನ ಸೋದರ ಸಂಬಂಧಿ ರಾಜಾ ಎಂಬಾತನ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯನ್ನು ರಾಜಾ ಹಾಗೂ ಆತನ ತಾಯಿ ಇಬ್ಬರೂ ಗಾಯಗೊಂಡಿದ್ದಾರೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಅಷ್ಟರಲ್ಲಿ ಧರ್ಮೇಂದರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ರಾಜಾ ನೀಡಿದ ದೂರಿನಂತೆ ಧರ್ಮೇಂದರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಝಜ್ಜಾರ್ ಠಾಣಾಧಿಕಾರಿ ರಮೇಶ್ ಕುಮಾರ್ ಹೇಳಿದ್ದಾರೆ.
ಮತದಾನದ ದಿನದಂದು ಧರ್ಮೇಂದರ್ ಹಾಗೂ ರಾಜಾನ ಮಧ್ಯೆ ಜಗಳವಾಗಿದೆ. ಬಿಜೆಪಿಗೆ ಮತ ಚಲಾಯಿಸುವಂತೆ ಧರ್ಮೇಂದರ್ ಹೇಳಿದಾಗ ರಾಜಾ ನಿರಾಕರಿಸಿದ್ದು, ಈ ಕಾರಣದಿಂದ ಆತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ರಾಜಾನ ತಾಯಿ ಹೇಳಿದ್ದಾರೆ.