ಮೇ 19ರಂದು 'ದೇವಾಡಿಗರ ನಡೆ ಪೊಳಲಿಯೆಡೆ'
ಬಂಟ್ವಾಳ, ಮೇ 16: ಪೂರ್ವಜರ ಕಾಲದಿಂದಲೂ ಪೊಳಲಿ ದೇವಸ್ಥಾನದಲ್ಲಿ ಶ್ರೀ ದೇವಿಯ ರಥ ಕಟ್ಟುವ ಸೇವೆಯನ್ನು ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಸಮಾಜ ಬಾಂಧವರು ನಡೆಸಿಕೊಂಡು ಬರುತ್ತಿದ್ದು, ಸಮಸ್ತ ದೇವಾಡಿಗ ಸಮಾಜ ಬಾಂಧವರ ವತಿಯಿಂದ ಶ್ರೀ ದೇವಿಗೆ ಷಷ್ಠಿ ರಥ ಸಮರ್ಪಣೆಯ ಸಮಾಲೋಚನಾ ಸಭೆಯನ್ನು ಮೇ 19ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿ ರುವ ಶ್ರೀ ದೇವರ ಷಷ್ಠಿ ರಥಕ್ಕೆ ಸಾಗುವಾನಿ, ಬೋಗಿ, ಹೆಬ್ಬಲಸು, ಸಂಪಿಗೆ ಇತ್ಯಾದಿ ಮರಗಳಿಂದ ಕೂಡಿರುತ್ತದೆ. ಹಿಂದೆ ಇದ್ದ ಷಷ್ಠಿ ರಥವು ತುಂಬಾ ಹಳೆಯದಾದ ಕಾರಣ ನಮ್ಮ ಮನವಿಯ ಮೇರೆಗೆ ಎಪ್ರಿಲ್ 28ರಂದು ನೂತನ ರಥ ನಿರ್ಮಾಣಕ್ಕೆ ಪೊಳಲಿ ಕ್ಷೇತ್ರದಿಂದ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತುಂಬೆ ಮಾತನಾಡಿ, ದೇಶ-ವಿದೇಶಗಳಿಂದ ದೇವಾಡಿಗ ಸಮಾಜದವರು ದೇವಾಡಿಗರ ನಡೆ ಶ್ರೀ ಪೆÇಳಲಿಯೆಡೆ ಎಂಬ ಧ್ಯೇಯವಾಕ್ಯದೊಂದಿಗೆ ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಸಾವಿರಾರು ಭಕ್ತಾದಿಗಳೊಂದಿಗೆ ಪ್ರಾರ್ಥನೆ ನಡೆಯಲಿದೆ. ಬಳಿಕ ನಡೆಯುವ ಸಮಾಲೋಚನಾ ಸಭೆಯಲ್ಲಿ ದೇವಾಲಯದ ಆಡಳಿತ ಮೊಕ್ತೇಸರರು, ತಂತ್ರಿಗಳು, ಅರ್ಚಕರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ನಾಗೇಶ್ ದೇವಾಡಿಗ, ಕೈರಂಗಳ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ದೇವಾಡಿಗ, ಪ್ರಶಾಂತ್ ದೇವಾಡಿಗ, ಮುರಳಿ ದೇವಾಡಿಗ, ನಾಗೇಶ್ ದೇವಾಡಿಗ ಉಪಸ್ಥಿತರಿದ್ದರು.