ಬೊಂಡಾ ಕುಡಿಯುತ್ತಿದ್ದ ವ್ಯಕ್ತಿಗೆ ಆ್ಯಂಬುಲೆನ್ಸ್ ಢಿಕ್ಕಿ; ಗಂಭೀರ ಗಾಯ
ಮಂಗಳೂರು, ಮೇ 16: ಬೊಂಡಾ (ಎಳೆನೀರು) ಕುಡಿಯುತ್ತಿದ್ದ ವ್ಯಕ್ತಿಯೋರ್ವನಿಗೆ ವೇಗದಲ್ಲಿ ಬಂದ ಆ್ಯಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 73ರ ಕಣ್ಣೂರು ಚೆಕ್ ಪೋಸ್ಟ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಕಣ್ಣೂರು ನಿವಾಸಿ ಅರ್ಶಿತ್ (34) ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ವಿವರ: ಗುರುವಾರ ಬೆಳಗ್ಗೆ 11:45ರ ಸುಮಾರು ಕಣ್ಣೂರು ಚೆಕ್ ಪೋಸ್ಟ್ ಬಳಿಯ ರಸ್ತೆಯ ಪಕ್ಕದಲ್ಲಿ ನಿಂತು ಬೊಂಡಾ ಕುಡಿಯುತ್ತಿದ್ದ ಅರ್ಶಿತ್ಗೆ ಮಂಗಳೂರು ಕಡೆಯಿಂದ ಬಿ.ಸಿ.ರೊಡ್ ಕಡೆಗೆ ಬರುತ್ತಿದ್ದ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದಿದೆ.
ಪರಿಣಾಮ ವ್ಯಕ್ತಿಯು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಸ್ವರೂಪದ ಗಾಗಳಾಗಿವೆ. ಬಾಯಲ್ಲಿ ರಕ್ತ ಬರುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಸ್ಥಳೀಯರು ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆ್ಯಂಬುಲೆನ್ಸ್ ಚಾಲಕ ಅಶೋಕ್ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.