ಕೊಂಕಣಿ ಕಾದಂಬರಿ ‘ಧುಂವ್ರಿ’ ಬಿಡುಗಡೆ
ಮಂಗಳೂರು, ಮೇ 16: ಲೀನಸ್ ಮೊರಾಸ್ ಕದ್ರಿ ರಚಿಸಿದ ಸೃಜನಾ ಪ್ರಕಾಶನವು ಪ್ರಕಟಿಸಿದ ಕೊಂಕಣಿ ಕಾದಂಬರಿ ‘ಧುಂವ್ರಿ’ಯ ಬಿಡುಗಡೆ ಕಾರ್ಯಕ್ರಮವು ಕದ್ರಿ ಕಂಬಳ ರಸ್ತೆಯಲ್ಲಿರುವ ಮೌರಿಷ್ಕಾ ಪ್ಯಾಲೇಸಿನ ರೂಪ್ಟಾಪ್ ಸಭಾಂಗಣದಲ್ಲಿ ಜರುಗಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೊನ್ಸಾ ತನ್ನ ಕಠಿಣ ಕಾಯಿಲೆಯ ಸಂದರ್ಭದಲ್ಲೂ ಆ ನೋವಿ ನಿಂದ ಮುಕ್ತಿ ಪಡೆಯಲು ಲೀನಸ್ ಮೊರಾಸ್ ಸಾಹಿತ್ಯವನ್ನು ಒಂದು ಮಾರ್ಗವಾಗಿ ಬಳಸಿ ಈ ಕಾದಂಬರಿ ರಚಿಸಿದ್ದಾರೆ. ಲೀನಸ್ ಶೀಘ್ರ ಗುಣಮುಖರಾಗಿ ಇನ್ನೂ ಹೆಚ್ಚಿನ ಸಾಹಿತ್ಯ ರಚಿಸಲಿ ಎಂದು ಶುಭ ಹಾರೈಸಿದರು.
ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಮೆಲ್ವಿನ್ ರೊಡ್ರಿಗಸ್ ಮಾತನಾಡಿ ಹೆಸರು ಮತ್ತು ಪರಿಚಯ ಮನುಷ್ಯನಿಗೆ ಅಸ್ಮಿತೆಯನ್ನು ನೀಡು ತ್ತದೆ. ತನ್ನ 65ನೇ ವರ್ಷದಲ್ಲಿ ಪ್ರಥಮ ಕಾದಂಬರಿ ಬರೆದು ಲೀನಸ್ ಅವರು ತನ್ನ ಅಸ್ಮಿತೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ ಎಂದರು.
ಲೇಖಕರ ಬಾಲ್ಯದ ಸಂಗತಿಗಳ ಬಗ್ಗೆ ಮಾರ್ಕ್ ಡಿಸೋಜ, ಉದ್ಯಮದ ಬಗ್ಗೆ ವಾಲ್ಟರ್ ಪೆರಿಸ್ ಹಾಗೂ ದುಬೈಯಲ್ಲಿ ಅವರ ಸಾಮಾಜಿಕ ಮತ್ತು ಸಂಘಟನಾ ಕೆಲಸಗಳ ಬಗ್ಗೆ ಪತ್ರಕರ್ತ ವಾಲ್ಟರ್ ನಂದಳಿಕೆ ಬೆಳಕು ಚೆಲ್ಲಿದರು.
ಲೇಖಕ ಲೀನಸ್ ತನ್ನ ಈ ಕನಸು ನನಸಾಗಲು ನೆರವಾದವರನ್ನು ಸ್ಮರಿಸಿದರು. ಲೇಖಕರ ಪತ್ನಿ ಜೆಸ್ಸಿ ಮೊರಾಸ್ ವಂದಿಸಿದರು. ಪ್ರಕಾಶಕ ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.