ಇವಿಎಂ ತಿರುಚುವಿಕೆ ವಿವಾದ: ಚುನಾವಣಾ ಆಯೋಗವನ್ನು ಭೇಟಿಯಾದ 22 ಪ್ರತಿಪಕ್ಷಗಳ ನಾಯಕರು
ಹೊಸದಿಲ್ಲಿ, ಮೇ 21: ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಹೇಳಲಾದ ವರದಿಯ ಕುರಿತಂತೆ 22 ಪ್ರತಿಪಕ್ಷಗಳ ನಾಯಕರು ಮಂಗಳವಾರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ವಿವಿ ಪ್ಯಾಟ್ ತಾಳೆ ಹಾಕುವ ಸಂದರ್ಭ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ, ಪ್ರತಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಶೇ. 100 ಚೀಟಿಗಳನ್ನು ಲೆಕ್ಕಹಾಕಬೇಕು ಹಾಗೂ ಇವಿಎಂ ಫಲಿತಾಂಶದೊಂದಿಗೆ ಹೋಲಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರತಿಪಕ್ಷಗಳ ನಾಯಕರು ಚುನಾವಣಾ ಆಯೋಗಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದ್ದಾರೆ. ಈ ವಿಷಯವನ್ನು ನಾವು ಕಳೆದ ಒಂದೂವರೆ ತಿಂಗಳಿಂದ ಎತ್ತುತ್ತಿದ್ದೇವೆ. ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ನಾವು ಚುನಾವಣಾ ಆಯೋಗದಲ್ಲಿ ಪ್ರಶ್ನಿಸಿದೆವು. ಆಶ್ಚರ್ಯಕರ ವಿಚಾರವೆಂದರೆ, ಚುನಾವಣಾ ಆಯೋಗ ನಮ್ಮ ಆಗ್ರಹವನ್ನು ಸರಿಸುಮಾರು ಒಂದು ಗಂಟೆಗಳ ಕಾಲ ಆಲಿಸಿತು ಹಾಗೂ ನಾಳೆ ನಾವು ಮತ್ತೆ ಭೇಟಿಯಾಗೋಣ ಎಂದು ಹೇಳಿತು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ. ಜನಾದೇಶಕ್ಕೆ ಗೌರವ ನೀಡಿ. ಅದನ್ನು ತಿರುಚಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ತಿಳಿಸಿವೆ ಎಂದು ತೆಲುಗು ದೇಶಂ ಪಕ್ಷದ ವರಿಷ್ಠ ಚಂದ್ರಬಾಬು ನಾಯ್ಡು ಹೇಳಿದ್ದಾರೆ.