ಕಡಬ: ಪತಿಯ ಕೊಲೆಗೆ ಯತ್ನ; ಆರೋಪಿ ಮಹಿಳೆ ಬಂಧನ
ಕಡಬ, ಮೇ 24. ನೂತನ ವಧುವೊಬ್ಬಳು ಗಂಡನನ್ನು ಕೊಲೆ ಮಾಡುವ ಉದ್ದೇಶದಿಂದ ಪತಿಗೆ ಚೂರಿಯಿಂದ ಇರಿದು ಪೊಲೀಸರ ಅತಿಥಿಯಾದ ಘಟನೆ ಗುರುವಾರ ರಾತ್ರಿ ಕಡಬ ತಾಲೂಕಿನ ಕೊಯಿಲ ಗ್ರಾಮದ ಏಣಿತಡ್ಕ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಏಣಿತಡ್ಕ ಅತ್ರೇಲು ನಿವಾಸಿ ಗೋಪಾಲಕೃಷ್ಣ ನಾಯ್ಕ ಎಂಬವರ ಪತ್ನಿ ಸುಪ್ರಿಯಾ (30) ಎಂದು ಗುರುತಿಸಲಾಗಿದೆ.
ಮೂಲತಃ ಬಂಟ್ವಾಳ ನಿವಾಸಿಯಾಗಿರುವ ಈಕೆಯನ್ನು ಇಪ್ಪತೈದು ದಿನಗಳ ಹಿಂದೆಯಷ್ಟೇ ಗೋಪಾಲಕೃಷ್ಣ ನಾಯ್ಕ ಮದುವೆಯಾಗಿದ್ದರು. ಆದರೆ ಈಕೆಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ. ಬೆಳ್ತಂಗಡಿಯ ವಿದ್ಯಾ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಈಕೆಗೆ ಗಂಡನಲ್ಲಿ ಇಷ್ಟವಿರಲಿಲ್ಲದ ಕಾರಣ ಗುರುವಾರ ರಾತ್ರಿ ಗಂಡ ಪತ್ನಿಯ ಕೋಣೆಗೆ ಬಂದ ವೇಳೆ ಸುಪ್ರಿಯಾ ತನ್ನ ಬ್ಯಾಗ್ನಲ್ಲಿರಿಸಿಕೊಂಡಿದ್ದ ಚೂರಿಯಿಂದ ಗಂಡನನ್ನು ಕೊಲೆ ಮಾಡುವ ಉದ್ದೇಶದಿಂದ ಎರಡು ಬಾರಿ ಇರಿದಿದ್ದಾಳೆ. ಗೋಪಾಲಕೃಷ್ಣನ ಕುತ್ತಿಗೆಗೆ ತಿವಿದಿರುವುದರಿಂದ ಗಂಭೀರ ಗಾಯಗೊಂಡ ಇವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.