ರಾಜಕಾರಣದಲ್ಲಿ ಏಳು ಬೀಳುಗಳು ಸಹಜ: ಮಾಜಿ ಸಂಸದ ಆರ್.ಧ್ರುವನಾರಾಯಣ್
ಹನೂರು: ಚುನಾವಣೆಗಳನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕಾಗುತ್ತದೆ. ಏಕೆಂದರೆ ರಾಜಕಾರಣದಲ್ಲಿ ಏಳು ಬೀಳುಗಳು ಸಹಜ. ಕಾರ್ಯಕರ್ತರು ಈ ಭಾರಿಯ ಫಲಿತಾಂಶದ ಬಗ್ಗೆ ಎದೆಗುಂದದೆ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಿ. ನಾನು ಸದಾ ನಿಮ್ಮ ಜೊತೆ ಇರುವೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.
ಪಟ್ಟಣ ಪಂಚಾಯತ್ ಚುನಾವಣೆಯ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ ಹಲವು ಲೋಪದೋಷಗಳ ಆದ ಪರಿಣಾಮ ಅಲ್ಪ ಅಂತರದಲ್ಲಿ ಈ ಸೋಲು ಉಂಟಾಗಿದೆ. ನನ್ನ ಸೋಲಿಗೆ ಸಂಪೂರ್ಣ ಹೊಣೆಯನ್ನು ನಾನೇ ಹೂರುತ್ತೇನೆ. ಚುನಾವಣೆಗಳನ್ನು ಕ್ರೀಡಾ ಮನೋಭಾವನೆಗಳಿಂದ ಸ್ವೀಕರಿಸ ಬೇಕಾಗುತ್ತದೆ. ರಾಜಕಾರಂದಲ್ಲಿ ಏಳು ಬೀಳುಗಳ ಸಹಜ ಎಂದು ಹೇಳಿದರು
ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿ: ಈಗಾಗಲೇ ಕಳೆದ 5 ವರ್ಷದ ಅವಧಿಯಲ್ಲಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಆದರೆ ಅವಧಿ ಮುಕ್ತಾಯಗೊಂಡ ಹಿನ್ನಲೆ ಮೇ 29ರಂದು ಇಲ್ಲಿನ ಪ.ಪಂ.ಗೆ ಚುನಾವಣೆ ನಡೆಯಲಿದ್ದು, 13 ವಾರ್ಡ್ಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ ಎಂದರು.
ತೃಪ್ತಿ ಇದೆ: ನಮ್ಮ ನೆರೆಯ ಮೈಸೂರು, ಮಂಡ್ಯ, ಸೇರಿದಂತೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳು ಲಕ್ಷಾಂತರ ಮತಗಳ ಅಂತರದಲ್ಲಿ ಸೋತಿದ್ದಾರೆ. ಹಾಗೂ ದೇಶದ ಹಲವಾರು ದಿಗ್ಗಜ ನಾಯಕರು ಕೂಡ ಮೋದಿ ಅಲೆಯಲ್ಲಿ ಸೋತಿದ್ದಾರೆ. ಈ ಕ್ಷೇತ್ರಗಳನ್ನೆಲ್ಲಾ ಅವಲೋಕನ ಮಾಡಿದಾಗ ನಾವು ಮೋದಿ ಅಲೆಯನ್ನು ಲೆಕ್ಕಿಸಿದೇ ನೇರಾನೇರ ಪೈಪೋಟಿ ನೀಡಿದ್ದೇವೆ ಎಂಬ ತೃಪ್ತಿ ನನಗೆ ಇದೆ ಎಂದರು
ಶಾಸಕ ಆರ್. ನರೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಡಿ.ಲೇಖಾ, ತಾಪಂ ಸದಸ್ಯ ಜವಾದ್ ಆಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ಈಶ್ವರ್, ಮುಖಂಡರಾದ ವೆಂಕರಮಣನಾಯ್ಡು, ಹಾಗೂ ಇನ್ನಿತರರಿದ್ದರು.