ತ್ಯಾಜ್ಯ ನೀರು ಸಂಪನ್ಮೂಲವಾಗಲಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಜಯರಾಮ್
ಬೆಂಗಳೂರು, ಜೂ.11: ತ್ಯಾಜ್ಯ ನೀರನ್ನು ಸಂಪನ್ಮೂಲವಾಗಿ ಪರಿಗಣಿಸಿ ಸದುಪಯೋಗ ಪಡೆಸಿಕೊಳ್ಳುವತ್ತ ಗಮನ ಹರಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಜಯರಾಮ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ‘ವಾಯು ಮಾಲಿನ್ಯ -ನಾವು ಉಸಿರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ, ನಾವು ಉಸಿರಾಡುವ ಗಾಳಿಯ ಗುಣಮಟ್ಟವನ್ನು ಕಾಪಾಡಲು ನಾವು ಏನನ್ನಾದರೂ ಮಾಡಬಹುದು’ ಈ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರಿನ ಮೂಲಗಳ ಮೇಲೆ ಹೆಚ್ಚಿನದಾಗಿ ಅವಲಂಬನೆ ಮಾಡದೆ, ಮಳೆ ನೀರು ಹಾಗೂ ನೀರಿನ ಮರು ಬಳಕೆಯಂತಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹಾಗೂ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವ ಮೂಲಕ ಒಂದು ಕುಟಂಬಕ್ಕೆ ಅಗತ್ಯವಾದ ನೀರನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್ ಮಾತನಾಡಿ, ನಗರದ ವಾಯು ಮಾಲಿನ್ಯ ನಿಯಂತ್ರಣದಲ್ಲಿ ಬೆಂಗಳೂರು ವಿವಿಯ ಬಯೋ ಪಾರ್ಕ್ನ ಕೊಡುಗೆಯನ್ನು ವಿವರಿಸಿ, ನೀರಿನ ಸದ್ಬಳಕೆ ಹಾಗೂ ಹವಾಮಾನ ಬದಲಾವಣೆಯ ವಿಷಯವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಈ ಕಾರ್ಯಕ್ರಮದ ಮುಖ್ಯ ಭಾಗವಾಗಿ ನೀರು, ಗಾಳಿ, ಮಣ್ಣು, ಶಬ್ದ, ಹವಾಮಾನ ಬದಲಾವಣೆ ಮತ್ತು ನಿರ್ವಹಣೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ ಸಮಸ್ಯೆಗಳು, ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ, ವಿವಿಧ ರೀತಿಯ ಮಾಲಿನ್ಯಗಳು ಮುಂತಾದ ಪರಿಸರದ ವಿಷಯಗಳ ಕುರಿತಂತೆ ವಿವಿಧ ರೀತಿಯ ಸ್ಪರ್ಧೆಗಳು, ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪರಿಸರ ವಿಜ್ಞಾನ ವಿಭಾಗದ ಪ್ರೊ.ನಂದಿನಿ ಪ್ರಸ್ತಾವಿಕವಾಗಿ ಮಾತನಾಡಿದರು, ಪ್ರೊ.ಚಂದ್ರಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.