ಮಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ಎಂಜಿನಿಯರ್ ಮನೆ, ಕಚೇರಿಗೆ ಎಸಿಬಿ ದಾಳಿ
ಮಂಗಳೂರು, ಜೂ.12: ಆದಾಯಕ್ಕಿಂತ ಅಧಿಕ ಆದಾಯ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಎಸ್.ಮಹದೇವಪ್ಪ ಅವರ ಕಚೇರಿ ಹಾಗೂ ಮನೆಗಳ ಮೇಲೆ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಹದೇವಪ್ಪ ಅವರ ಮಂಗಳೂರು, ಬೆಂಗಳೂರು, ಚಿತ್ರದುರ್ಗದ ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ಈ ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಕುರಿತು ಶೋಧ ನಡೆಸುತ್ತಿದ್ದಾರೆ.
ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರರಾಗಿ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಹಾದೇವಪ್ಪಅವರ ನಗರದ ಕದ್ರಿ ಕಂಬಳದಲ್ಲಿರುವ ಬಾಡಿಗೆ ಮನೆ, ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಚೇರಿ, ಬೆಂಗಳೂರಿನ ಸಿದ್ದೇನೆಹಳ್ಳಿಯಲ್ಲಿರುವ ಮನೆ ಹಾಗೂ ಚಿತ್ರದುರ್ಗದಲ್ಲಿ ಇರುವ ಸಂಬಂಧಿಕರೊಬ್ಬರ ಮನೆ ಮೇಲೂ ಬೆಳ್ಳಂಬೆಳಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ವಿಭಾಗದ ಡಿವೈಎಸ್ಪಿ ಮಂಜುನಾಥ್ ಬಿ. ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಮೋಹನ್ ಕೊಟ್ಟಾರಿ, ಹಾಲಪ್ಪ, ಜಯರಾಮ್ ಗೌಡ ದಾಳಿ ನಡೆಸಿದ್ದಾರೆ.