ಗಿರೀಶ್ ಕಾರ್ನಾಡ್ ರಂಗಭೂಮಿಗೆ ಶ್ರೇಷ್ಠನಾಟಕ ಕೃತಿಗಳನ್ನು ನೀಡಿದವರು: ಐ.ಕೆ.ಬೊಳುವಾರು
ಗಿರೀಶ್ ಕಾರ್ನಾಡರಿಗೆ ನುಡಿನಮನ
ಮಂಗಳೂರು, ಜೂ.12: ಗಿರೀಶ್ ಕಾರ್ನಾಡ್ ಶ್ರೇಷ್ಠ ನಾಟಕ ಕೃತಿಗಳನ್ನು ರಂಗ ಭೂಮಿಗೆ ನೀಡಿದವರು, ಕೃತಿಯ ವಸ್ತು, ಸಂಭಾಷಣೆ, ಚೌಕಟ್ಟುಗಳಲ್ಲಿ ಅತ್ಯತ್ತಮವಾದ ರೀತಿಯಲ್ಲಿ ರಂಗಭೂಮಿಗೆ ನೀಡಿದವರು ಎಂದು ರಂಗಕರ್ಮಿ ಐ.ಕೆ.ಬೊಳುವಾರು ತಿಳಿಸಿದ್ದಾರೆ.
ನಗರದ ಪಾದುವ ರಂಗ ಅಧ್ಯಯನ ಕೇಂದ್ರ,ಅಸ್ತಿತ್ವ ,ಅರೆಹೊಳೆ ಪ್ರತಿಷ್ಠಾನದ ವತಿಯಿಂದ ಪಾದುವಾ ಕಾಲೇಜಿನಲ್ಲಿಂದು ಹಮ್ಮಿಕೊಂಡ ಅಗಲಿದ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ರಿಗೆ ನುಡಿನಮನ ಸಲ್ಲಿಸಿ ಅವರು ಇಂದು ಮಾತನಾಡಿದರು.
ಗಿರೀಶ್ ಕಾರ್ನಾಡರು ಬರೆದ 15 ನಾಟಕ ಕೃತಿಗಳು ಕನ್ನಡ ರಂಗ ಭೂಮಿಯ ಶ್ರೇಷ್ಠ ಕೃತಿಗಳಾಗಿವೆ. ಉತ್ತಮ ನಾಟಕ ಕೃತಿಗಳನ್ನು ರಚಿಸುವು ದರಲ್ಲಿ ಅವುಗಳ ಸಂಭಾಷಣೆಯಲ್ಲಿ ಕಾರ್ನಾಡರು ತಮ್ಮದೇ ಛಾಪು ಮೂಡಿಸಿದವರು ಎಂದ ಐ.ಕೆ.ಬೊಳುವಾರು ಅವರ ಸರಳ ವ್ಯಕ್ತಿತ್ವವನ್ನು, ಅವರನ್ನು ಭೇಟಿ ಮಾಡಿದ ಸಂದರ್ಭವನ್ನು ಸ್ಮರಿಸಿಕೊಂಡರು.
ಸಾಹಿತಿಗೆ ಸಾವಿಲ್ಲ ಅವರು ತಮ್ಮ ಕೃತಿಗಳ ಮೂಲಕ ಸಮಾಜದಲ್ಲಿ ಸದಾ ನಮ್ಮಿಂದಿಗೆ ಇರುತ್ತಾರೆ. ಕಾರ್ನಾಡರಂತಹ ಮೇರು ವ್ಯಕ್ತಿತ್ವದ ಸಾಹಿತಿ ಸಮಾಜದಲ್ಲಿ ಯಾವೂದು ಸರಿ ಯಾವೂದು ತಪ್ಪು ಎಂದು ನೇರವಾಗಿ ಹೇಳುತ್ತಿದ್ದವರು. ಅಸ್ತಿತ್ವ ವಾದದ ಬಗ್ಗೆ ನಂಬಿಕೆ ಇಟ್ಟಿದ್ದ ಕಾರ್ನಾಡರು ತಮ್ಮ ನಿಲುವನ್ನು ತಮ್ಮ ನಡೆ ನುಡಿ, ಕೃತಿಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಅವರು ನಮ್ಮ ಸಮಾಜದ ಅಮೂಲ್ಯ ಸೊತ್ತಾಗಿದ್ದರು ಅಂತಹ ವ್ಯಕ್ತಿ ನಮ್ಮಿಂದ ದೂರವಾಗಿರುವ ನೋವು ನಮ್ಮನ್ನು ಕಾಡುತ್ತದೆ .ಅವರ ಕೃತಿಗಳು ಸಮಾಜಕ್ಕೆ ದಾರಿ ದೀವಿಗೆಯಾಗಲಿ ಎಂದು ಪಾದುವ ಕಾಲೇಜಿನ ಪ್ರಾಂಶುಪಾಲ ವಂ.ಅಲ್ವಿನ್ ಸೆರಾವೋ ನುಡಿನಮನ ಸಲ್ಲಿಸಿದ್ದಾರೆ.
ಗಿರೀಶ್ ಕಾರ್ನಾಡ್ ನಮ್ಮ ನಾಡಿನ ಮಹಾನ್ ಸಾಹಿತಿಯಾಗಿ ಜಾಗತಿಕವಾಗಿ ಗೌರವಕ್ಕೆ ಪಾತ್ರರಾದವರು,ಜ್ಞಾನ ಪ್ರೀಠ ಪ್ರಶಸ್ತಿಯಂತಹ ದೇಶದ ಶ್ರೇಷ್ಠ ಪ್ರಶಸ್ತಿ ,ಗೌರವಕ್ಕೆ ಪಾತ್ರರಾದ ವ್ಯಕ್ತಿ ನಮ್ಮ ಊರಿನ ಪ್ರತಿಭೆ ಎನ್ನುವುದು ನಮಗೆ ಹೆಮ್ಮೆಯ ಸಂಕೇತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ನುಡಿನಮನ ಸಲ್ಲಿಸಿದರು.
ಗಿರೀಶ್ ಕಾರ್ನಾಡ್ ಸಾಹಿತಿ, ನಾಟಕಕಾರ ಮಾತ್ರವಲ್ಲ ಉತ್ತಮ ನಟರಾಗಿದ್ದರು ಎಂದು ಕಲಾವಿದ ಶಶಿರಾಜ್ ಕಾವೂರು ನುಡಿನಮನ ಸಲ್ಲಿಸಿದರು. ಗಿರೀಶ್ ಕಾರ್ನಾಡರ ನಾಟಕದ ಸರಳ ಹಾಗೂ ಭಾವನಾತ್ಮಕ ,ಪರಿಣಾಮಕಾರಿ, ಸಂಭಾಷಣೆಗಳ ಮೂಲಕ ಅವರು ಉತ್ತಮ ನಾಟಕಗಳನ್ನು ರಂಗಭೂಮಿಗೆ ನೀಡಿದ್ದಾರೆ ಎಂದು ಸಂಕೇತ ನಾಟಕ ತಂಡದ ನಿರ್ದೇಶಕ ಜಗನ್ ಪವಾರ್ ನುಡಿನಮನ ಸಲ್ಲಿಸಿದರು.
ಖ್ಯಾತ ಜಾದುಗಾರ ಕುದ್ರೋಳಿ ಗಣೇಶ್ ಕಾರ್ನಾಡ್ರಂತಹ ಮಹಾನ್ ಸಾಧಕ ಹಾಗೂ ಇಳಿ ವಯಸ್ಸಿನಲ್ಲೂ ಅವರಲ್ಲಿದ್ದ ಜೀವನೋತ್ಸಾಹಕ್ಕೆ ಅವರು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರೀತಿ ಸಾಕ್ಷಿಯಾಗಿದೆ. ಅವರ ಸಾಧನೆಯ ಮೂಲಕ ಎಲ್ಲರೂ ಗೌರವಕ್ಕೂ ಪಾತ್ರವಾಗುವ ಉನ್ನತ ಸ್ಥಾನಕ್ಕೇರಿದ್ದರು ಎಂದು ಗಿರೀಶ್ ಕಾರ್ನಾಡರಿಗೆ ನುಡಿನಮನ ಸಲ್ಲಿಸಿದರು.
ಸಮಾರಂಭದಲ್ಲಿ ಅರೆ ಹೊಳೆ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಸದಾಶಿವ ರಾವ್ ಸ್ವಾಗತಿಸಿದರು. ಪಾದುವ ರಂಗ ಅಧ್ಯಯನ ಕೇಂದ್ರದ ರಂಗಕರ್ಮಿ ಕ್ರಿಸ್ಟೋಫರ್ ವಂದಿಸಿದರು. ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ, ಅಸ್ತಿತ್ವ, ಪಾದುವ ರಂಗ ಅಧ್ಯಯನ ಕೇಂದ್ರದ ಸದಸ್ಯರು ರಂಗ ಗೀತೆಗಳ ಮೂಲಕ ಗಿರೀಶ್ ಕಾರ್ನಾಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.