ಐಎಂಎ ವಂಚನೆ ಪ್ರಕರಣ: ಆಸ್ತಿ ಜಪ್ತಿ ಮಾಡಿ ಹೂಡಿಕೆದಾರರಿಗೆ ಹಂಚಿ- ಯಡಿಯೂರಪ್ಪ ಆಗ್ರಹ
"ಸಿಟ್ ನಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಇಲ್ಲ"
ಬೆಂಗಳೂರು, ಜೂ.16: ಐಎಂಎ ಸಮೂಹ ಸಂಸ್ಥೆಗಳ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಅವರ ಆಸ್ತಿ ಜಪ್ತಿ ಮಾಡುವ ಜೊತೆಗೆ, ಹರಾಜು ಹಾಕಿ ಈ ಕೂಡಲೇ ಹೂಡಿಕೆದಾರರಿಗೆ ಹಂಚಿಕೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.
ರವಿವಾರ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ್ಸೂರ್ ಅವರ ಆಸ್ತಿಪಾಸ್ತಿಯನ್ನು ತಕ್ಷಣವೇ ಸರಕಾರ ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಐಎಂಎ ಹಗರಣದಲ್ಲಿ ಸರಕಾರದ ಪ್ರಭಾವಿಗಳೇ ಶಾಮೀಲಾಗಿದ್ದಾರೆ. ಸಚಿವ ಝಮೀರ್ ಅಹ್ಮದ್ ಅವರಿಗೆ ಐಎಂಎ ಮಾಲಕ ಮನ್ಸೂರ್ ತುಂಬಾ ಆತ್ಮೀಯ. ಈಗ ಸಿಟ್ ರಚನೆ ಮಾಡಿರುವುದು ಪ್ರಭಾವಿಗಳ ರಕ್ಷಣೆಗಾಗಿ ಎಂದು ಹೇಳಿದರು.
ಸಿಟ್ಯಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಇಲ್ಲ. ಐಎಂಎ ಬೇರುಗಳು, ಬೇರೆ ಬೇರೆ ರಾಜ್ಯಗಳಲ್ಲದೆ, ವಿದೇಶಗಳಿಗೂ ಹಬ್ಬಿವೆ. ಸಿಬಿಐ ತನಿಖೆಗೆ ಒಳಪಡಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆದು ಹಣ ಹೂಡಿಕೆ ಮಾಡಿರುವ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.