ಕೃಷ್ಣಮೃಗದ ಚರ್ಮ ಸಾಗಾಟ: ಇಬ್ಬರ ಬಂಧನ
ಮಂಗಳೂರು, ಜೂ.16: ಮಾರಾಟದ ಉದ್ದೇಶಕ್ಕೆ ಕೃಷ್ಣಮೃಗದ ಚರ್ಮ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ರಮೇಶ್ ಮಲ್ಲಪ್ಪ ಯಾದವಾಡ್ (51) ಹಾಗೂ ರಾಜು ಬಿರಾದಾರ್ (47) ಬಂಧಿತರು.
ಕೂಳೂರಿನ ಕುದುರೆಮುಖ ಜಂಕ್ಷನ್ ಬಳಿ ಗೋಣಿ ಚೀಲ ಹಿಡಿದುಕೊಂಡಿದ್ದ ಆರೋಪಿಗಳು ಪೊಲೀಸ್ ಜೀಪ್ ಕಂಡೊಡನೆ ಗೋಣಿ ಚೀಲವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಬೆನ್ನತ್ತಿ ಹಿಡಿದ ಪೊಲೀಸರು, ಗೋಣಿಚೀಲ ಪರಿಶೀಲಿಸಿದಾಗ ಕೃಷ್ಣಮೃಗದ ಚರ್ಮ ಇರುವುದು ಕಂಡುಬಂದಿದೆ. ಆರೋಪಿಗಳು ಮತ್ತು ವಶಕ್ಕೆ ಪಡೆದ ಸೊತ್ತನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಆಯುಕ್ತರಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ನಿರ್ದೇಶನದಂತೆ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಆರ್. ಗೌಡ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸತ್ಯನಾರಾಯಣ, ಸಿಬ್ಬಂದಿ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.