ಮಹಾರಾಷ್ಟ್ರ ಸಂಪುಟ ಪುನಾರಚನೆ: 13 ನೂತನ ಸಚಿವರ ಪ್ರಮಾಣ
ಮುಂಬೈ, ಜೂ. 16: ಮಹಾರಾಷ್ಟ್ರ ರಾಜ್ಯ ಸಂಪುಟದ ಮೂರನೆ ಪುನಾರಚನೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವಿವಾರ 8 ಸಂಪುಟ ಸಚಿವರು ಹಾಗೂ ಐವರು ರಾಜ್ಯ ಸಚಿವರನ್ನು ಸೇರಿಸಿದ್ದಾರೆ.
ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಪ್ರತಿಪಕ್ಷದ ಮಾಜಿ ನಾಯಕ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಹಾಗೂ ನ್ಯಾಶನಲ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ದ ಜಯದತ್ತಾ ಕ್ಷೀರಸಾಗರ್ ಸೇರಿದ್ದಾರೆ.
ರಾಜ್ಯದಲ್ಲಿ 2009-2014ರ ವರೆಗೆ ಇದ್ದ ಕಾಂಗ್ರೆಸ್-ಎನ್ಸಿಪಿ ಸರಕಾರದಲ್ಲಿ ಕ್ಷೀರಸಾಗರ್ ಅವರು ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ಮಂಡಳಿಯ ಸಚಿವರಾಗಿದ್ದರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕ ಅವಿನಾಶ್ ಮಹತೇಕರ್ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಸ್ತುತ ಈ ಮೂವರು ಯಾವುದೇ ಸದನಗಳಲ್ಲಿ ಶಾಸಕರಲ್ಲ. ಅವರು 6 ತಿಂಗಳ ಅವಧಿಗೆ ಸಚಿವರಾಗಿ ಹುದ್ದೆಯಲ್ಲಿ ಮುಂದುವರಿಯಬಹುದು. ಅಕ್ಟೋಬರ್ನ ಮೊದಲು ಚುನಾವಣೆ ನಡೆಯಲಿದೆ. ಆದುದರಿಂದ ಅವರು ಅಧಿಕಾರಾವಧಿ ಚಿಕ್ಕದಾಗಿರಲಿದೆ.
ಬಿಜೆಪಿ ಮುಂಬೈ ವರಿಷ್ಠ ಆಶಿಶ್ ಶೆಲಾರ್, ಸುರೇಶ್ ಖಾಡೆ, ಡಾ. ಸಂಜಯ್ ಕುಟೆ, ಡಾ. ಅನಿಲ್ ಬೊಂಡೆ ಹಾಗೂ ಅಶೋಕ್ ಉಕೆ ಸಂಪುಟ ಸಚಿವರಾಗಿ ಸೇರಿದ ಇತರರು. ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಿವಸೇನೆಯ ಏಕೈಕ ಸದಸ್ಯ ತಂಜಿ ಸಾವಂತ್.
ಬಿಜೆಪಿಯ ಯೋಗೇಶ್ ಸಾಗರ್, ಸಂಜಯ್ ಆಲಿಯಾಸ್ ಬಾಲಾ ಭೇಗಡೆ, ಪರಿಣಯ್ ಫುಕೆ ಹಾಗೂ ಅತುಲ್ ಸಾವೆ ಕಿರಿಯ ಸಚಿವರಾಗಿ ಸಂಪುಟ ಸೇರಿದ್ದಾರೆ.