ವೈದ್ಯರ ಮುಷ್ಕರಕ್ಕೆ ಕರೆ ನೀಡಿದ್ದ ಐಎಂಎಗೆ ‘ಕೆಲ ವಿಚಾರ’ಗಳನ್ನು ನೆನಪಿಸಿದ ಡಾ. ಕಫೀಲ್ ಖಾನ್
ಹೊಸದಿಲ್ಲಿ, ಜೂ.17: ಕೊಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಪ್ರತಿಭಟಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೋರಖಪುರದಲ್ಲಿ ಆಮ್ಲಜನಕ ಕೊರತೆಯಿಂದಾಗಿ 30 ಮಕ್ಕಳು ಸಾವಿಗೀಡಾದ ಆಸ್ಪತ್ರೆಯ ವೈದ್ಯರು ಎದುರಿಸಿದ ಸಮಸ್ಯೆಯ ವಿಚಾರದಲ್ಲಿ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಗೋರಖಪುರ್ ಘಟನೆಯ ನಂತರ ವಜಾಗೊಂಡಿದ್ದ ಹಾಗೂ ಸರಕಾರದ ಕ್ರಮಗಳಿಂದಾಗಿ ಬಲಿಪಶುವಾದ ವೈದ್ಯರ ಸಹಾಯಕ್ಕೆ ಐಎಂಎ ಹೆಚ್ಚಿಗೇನೂ ಮಾಡದ ಹೊರತಾಗಿ ಅವರಿಗೆ ಬೆಂಬಲ ವ್ಯಕ್ತಪಡಿಸಲು ಎಂಟು ತಿಂಗಳುಗಳ ತನಕ ಕಾದಿತ್ತು.
ಗೋರಖಪುರ್ ದುರಂತದ ನಂತರ ಉತ್ತರ ಪ್ರದೇಶ ಸರಕಾರವು ಗೋರಖಪುರ್ ಬಾಬಾ ರಾಘವ್ ದಾಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕಫೀಲ್ ಖಾನ್, ಪ್ರಾಂಶುಪಾಲ ರಾಜೀವ್ ಮಿಶ್ರಾ ಹಾಗೂ ಅರಿವಳಿಕೆ ತಜ್ಞ ಸತೀಶ್ ಕುಮಾರ್ ಅವರನ್ನು ಆಗಸ್ಟ್ 2017ರಲ್ಲಿ ಬಂಧಿಸಿತ್ತು.
“ನಾನು ಜೈಲಿನಿಂದಲೇ ಐಎಂಎಗೆ ಹಲವಾರು ಪತ್ರಗಳನ್ನು ಬರೆದರೆ, ನನ್ನ ಪತ್ನಿ ಹಾಗೂ ಸೋದರ ದಿಲ್ಲಿಯ ಐಎಂಎ ಮುಖ್ಯ ಕಾರ್ಯಾಲಯಕ್ಕೂ ತೆರಲಿದ್ದರು'' ಎಂದು ಡಾ. ಕಫೀಲ್ ಖಾನ್ ಹೇಳುತ್ತಾರೆ. ತಾವು ಐಎಂಎ ಬೆಂಬಲಕ್ಕಾಗಿ ಸತತ ಮನವಿ ಸಲ್ಲಿಸಿದ್ದಾಗಿ ತಿಳಿಸಿದ ಅವರು, ಅಲಹಾಬಾದ್ ಹೈಕೋರ್ಟ್ ಕೂಡ ತಾನು ವೈದ್ಯಕೀಯ ನಿರ್ಲಕ್ಷ್ಯವೆಸಗಿದ್ದೇನೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಹಾಗೂ ಆಮ್ಲಜನಕ ಪೂರೈಕೆ ಪ್ರಕ್ರಿಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿತ್ತು ಎಂದಿದ್ದಾರೆ.
ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ದಾಳಿಗಳಿಂದ ತನಗೆ ಆಕ್ರೋಶವುಂಟಾಗಿದೆ ಎಂದು ಹೇಳಿದ ಅವರು ವೈದ್ಯರ ಮೇಲೆ ನಡೆಯುವ ಹಿಂಸೆ ಎಲ್ಲಿ ನಡೆದರೂ ಖಂಡಿಸುವುದಾಗಿ ತಿಳಿಸಿದರು. “ಅದೇ ಸಮಯ ಸೋಮವಾರ ಐಎಂಎ ನೀಡಿದ ದೇಶವ್ಯಾಪಿ ಮುಷ್ಕರ ಕರೆಯನ್ನು ನಾನು ಬೆಂಬಲಿಸುವುದಿಲ್ಲ. ಹಿಂಸೆಯಿಂದ ವೈದ್ಯರನ್ನು ರಕ್ಷಿಸುವ ಶಾಸನ ಜಾರಿಗೆ ಸರಕಾರಕ್ಕೆ ವೈದ್ಯ ಸಮುದಾಯ ಸಮಯಾವಕಾಶ ನೀಡಬೇಕು ಎಂಬುದು ನನ್ನ ಅನಿಸಿಕೆ'' ಎಂದು ಡಾ. ಖಾನ್ telegraphindia.com ಜತೆ ಮಾತನಾಡುತ್ತಾ ಹೇಳಿದ್ದಾರೆ.
``ದೇಶದೆಲ್ಲೆಡೆ ವೈದ್ಯರು ಎದುರಿಸುತ್ತಿರುವ ಹಿಂಸೆ ಕೂಡ ಹಿಂದೆಂದೂ ಕಂಡರಿಯದಷ್ಟಿದೆಯಾಗಿರುವುದರಿಂದ ಇಂದಿನ ಮುಷ್ಕರ ಕರೆ ನೀಡಲಾಗಿದೆ. ಅನ್ಯಾಯವೆದುರಿಸಿದ ಡಾ. ಕಫೀಲ್ ಖಾನ್ ಹಾಗೂ ಇತರ ವೈದ್ಯರಿಗೂ ಐಎಂಎ ಬೆಂಬಲ ನೀಡುವುದು. ನಾವು ಸಾಂಸ್ಥಿಕ ಬೆಂಬಲ ನೀಡಲು ಸಿದ್ಧ'' ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಆರ್. ವಿ. ಅಶೋಕನ್ ಹೇಳಿದ್ದಾರೆ.
ಹಿರಿಯ ಐಎಂಎ ಅಧಿಕಾರಿಗಳು ಖಾನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ನಂತರ ಎಪ್ರಿಲ್ 2018ರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರಿಗೆ ಹಾಗೂ ಬಂಧಿತರಾದ ಇತರ ವೈದ್ಯರಿಗೆ ಬೆಂಬಲ ಘೋಷಿಸಿದ್ದರು. ಆದರೆ ಬೆಂಬಲ ಘೋಷಿಸಿದ ಹೊರತಾಗಿ ಈ ವೈದ್ಯರಿಗೆ ಬೇರೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿರಲಾಗಿರಲಿಲ್ಲ.
``ಹಿಂಸೆ ವಿವಿಧ ರೀತಿಯಲ್ಲಿ ನಡೆಯುತ್ತದೆ, ಗೋರಖಪುರ್ ಆಸ್ಪತ್ರೆಯ ವೈದ್ಯರಿಗೆ ನಡೆದಿದ್ದೂ ದೌರ್ಜನ್ಯ'' ಎಂದು ಆಸ್ಪತ್ರೆಯ ಪ್ರಾಂಶುಪಾಲರ ಪುತ್ರ ಹಾಗೂ ಸರ್ಜನ್ ಪುರಕ್ ಮಿಶ್ರಾ ಹೇಳುತ್ತಾರೆ.
ಕೊಲ್ಕತ್ತಾ ಆಸ್ಪತ್ರೆಯ ಘಟನೆಯನ್ನು ರಾಜಕೀಯ ಲಾಭಗಳಿಗಾಗಿ ರಾಜಕೀಯ ಬಣ್ಣ ಹಚ್ಚಲಾಗಿದೆ ಎಂದು ಖಾನ್ ಹಾಗೂ ಮಿಶ್ರಾ ಅಭಿಪ್ರಾಯ ಪಡುತ್ತಾರೆ. ``ನನಗೊಂದು ಪ್ರಶ್ನೆ ಕೇಳಲಿದೆ. ಈ ಘಟನೆ ಬಂಗಾಳದಲ್ಲದೆ ಬೇರೆ ರಾಜ್ಯದಲ್ಲಿ ನಡೆದಿರುತ್ತಿದ್ದರೆ ಇಷ್ಟೊಂದು ಸದ್ದು ಮಾಡಲಾಗುತ್ತಿತ್ತೇ?'' ಎಂದು ಅವರು ಪ್ರ್ರಶ್ನಿಸುತ್ತಾರೆ. ವೈದ್ಯರ ವಿರುದ್ಧದ ಹಿಂಸೆ ವಿಚಾರದಲ್ಲಿ ಐಎಂಎ ದೃಢ ನಿಲುವು ತಳೆದಿದ್ದು ಸಂತೋಷ ಎಂದು ಮಿಶ್ರಾ ಹೇಳುತ್ತಾರೆ.
ತನ್ನ ವಜಾದ ವಿಚಾರ ಕುರಿತಂತೆ ಐಎಂಎ ಸಹಾಯ ಕೋರಿದ್ದಾಗಿ ಡಾ. ಖಾನ್ ಹೇಳುತ್ತಾರೆ. ``ನನಗೆ ಜೀವನ ಸಾಗಿಸಬೇಕಿದೆ ಆದರೆ ಉತ್ತರ ಪ್ರದೇಶ ಸರಕಾರ ನನಗೆ ಬರಬೇಕಾಗಿರುವ ಬಾಕಿ ಹಣವನ್ನೂ ನೀಡುತ್ತಿಲ್ಲ ಹಾಗೂ ನನ್ನ ವಜಾ ಆದೇಶವನ್ನೂ ವಾಪಸ್ ಪಡೆಯತ್ತಿಲ್ಲ,'' ಎಂದು ಅವರು ತಿಳಿಸುತ್ತಾರೆ.
ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ನಿಂತಲ್ಲಿ ಮಕ್ಕಳ ಜೀವಕ್ಕೆ ಅಪಾಯವಿದೆಯೆಂಬ ಬಗ್ಗೆ ತಾವು ತಮ್ಮ ಆಸ್ಪತ್ರೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಎಚ್ಚರಿಸಿದ್ದೆ ಎಂದು ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಡಾ ಖಾನ್ ವಿವರಿಸಿದ್ದಾರೆ.