ವಿಧವೆ ಮೇಲೆ ಅತ್ಯಾಚಾರಕ್ಕೆ ಯತ್ನ: ಮೂವರ ವಿರುದ್ಧ ಎಫ್ಐಆರ್
ಮೈಸೂರು,ಜೂ.18: ಬಹಿರ್ದೆಸೆಗೆ ತೆರಳಿದ್ದ ವಿಧವೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾದ ಅಮಾನವೀಯ ಘಟನೆ ಮೈಸೂರು ತಾಲೂಕಿನ ಎಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಧವೆ ಮೇಲೆ ಅದೇ ಗ್ರಾಮದ ಯೋಗಾನಂದ ಎಂಬ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ನಿನ್ನೆ ಬೆಳಗಿನ ಜಾವ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಕೊಲೆ ಮಾಡುವುದಾಗಿ ಯುವಕ ಬೆದರಿಕೆ ಹಾಕಿದ್ದ. ಘಟನೆ ನಡೆದ ಬಳಿಕ ಯೋಗಾನಂದ ತಂದೆ ಶಿವಪಾದಸ್ವಾಮಿಗೆ ಮಹಿಳೆ ವಿಷಯ ತಿಳಿಸಿದ್ದಾರೆ. ತಂದೆಯೂ ಕೂಡ ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಗ್ರಾಮದಿಂದ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಯೋಗಾನಂದ ಸೇರಿದಂತೆ ಆತನ ತಂದೆ ಶಿವಪಾದಸ್ವಾಮಿ, ಮತ್ತೋರ್ವ ಆತನ ಸಂಬಂಧಿಕ ನಂಜುಂಡಸ್ವಾಮಿ ಮೇಲೆ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.