ಜುಲೈ 31ರಂದು ಹಾಜರಾಗಿ, ಇಲ್ಲವೇ ಪರಿಣಾಮ ಎದುರಿಸಿ: ಝಾಕಿರ್ ನಾಯ್ಕ್ ಗೆ ಮುಂಬೈ ವಿಶೇಷ ನ್ಯಾಯಾಲಯ ಎಚ್ಚರಿಕೆ
ಮುಂಬೈ, ಜೂ. 19: ಜುಲೈ 31ರಂದು ವೈಯುಕ್ತಿಕವಾಗಿ ಹಾಜರಾಗುವಂತೆ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರಿಗೆ ಪಿಎಂಎಲ್ಎ ನ್ಯಾಯಾಲಯ ಆದೇಶಿಸಿದೆ. ಅಂದು ಹಾಜರಾಗಲು ವಿಫಲವಾದರೆ, ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಝಾಕಿರ್ ನಾಯ್ಕ್ ವಿರುದ್ಧ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸುವಂತೆ ಜಾರಿ ನಿರ್ದೇಶನಾಲಯ ಕೋರಿದ ಬಳಿಕ ಈ ಬೆಳವಣಿಗೆ ನಡೆದಿದೆ. ಝಾಕಿರ್ ನಾಯ್ಕ್ ಅವರು ಹಣ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಮಲೇಶ್ಯದಲ್ಲಿ ಇದ್ದಾರೆ ಎಂದು ಹೇಳಲಾದ ಝಾಕಿರ್ ನಾಯ್ಕ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ. ಜಾರಿ ನಿರ್ದೇಶನಾಲಯ ಮುಂಬೈಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಪಿಎಂಎಲ್ಎ ಅಡಿಯಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಪ್ರಥಮ ಮಾಹಿತಿ ವರದಿ ಆಧಾರದಲ್ಲಿ ಜಾರಿ ನಿರ್ದೇಶನಾಲಯ 2016ರಲ್ಲಿ ಝಾಕಿರ್ ನಾಯ್ಕ್ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದಲ್ಲದೆ, ಝಾಕಿರ್ ನಾಯ್ಕ್ ಭಾರತದಲ್ಲಿ ಕೋಮು ಹಿಂಸಾಚಾರಕ್ಕೆ ಉತ್ತೇಜನ ಹಾಗೂ ಕಾನೂನು ಬಾಹಿರ ಚಟುವಟಿಕೆ ಆರೋಪ ಎದುರಿಸುತ್ತಿದ್ದಾರೆ.