ರೋಷನ್ ಬೇಗ್ ಮನೆ ಮುಂದೆ ಶಾಲಾ ಮಕ್ಕಳು, ನೂರಾರು ಪೋಷಕರಿಂದ ಧರಣಿ
ಬೆಂಗಳೂರು, ಜೂ. 19: ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧ ಹಾಗೂ ಶಿಕ್ಷಕರನ್ನು ನೇಮಿಸಿ ಎಂದು ಆಗ್ರಹಿಸಿ ಶಿವಾಜಿನಗರದ ವಿ.ಕೆ.ಒಬೇದುಲ್ಲಾ ಸರಕಾರಿ ಶಾಲೆ (ವಿಕೆಒ ಶಾಲೆ) ಮಕ್ಕಳು, ನೂರಾರು ಪೋಷಕರು, ಶಾಸಕ ರೋಷನ್ ಬೇಗ್ ಮನೆ ಮುಂದೆ ಧರಣಿ ನಡೆಸಿದರು.
ಬುಧವಾರ ಇಲ್ಲಿನ ಕೋಲ್ಸ್ ಪಾರ್ಕ್ ಬಳಿಯ ಸ್ಪೆನ್ಸರ್ ರಸ್ತೆಯಲ್ಲಿರುವ ರೋಷನ್ ಬೇಗ್ ನಿವಾಸದ ಮುಂದೆ ಜಮಾಯಿಸಿದ ಪೋಷಕರು, ಸರಕಾರ ಹಾಗೂ ಐಎಂಎ ಸಂಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲಕಾಲ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಈ ವೇಳೆ ಶಾಲೆಯ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಚಾಲಕರು ಪರದಾಡಿದರು. ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ.
ನಮ್ಮ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿದೆ. ಯಾವ ಜನಪ್ರತಿನಿಧಿಗಳೂ ಇತ್ತ ತಿರುಗಿ ನೋಡಿಲ್ಲ. ಹೇಗಾದರೂ ಮಾಡಿ ಸರಕಾರ ಇದೇ ಶಾಲೆಯಲ್ಲಿ ತಮ್ಮ ಮಕ್ಕಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಯ ತಾಯಿ ಮನವಿ ಮಾಡಿಕೊಂಡರು.
ಶೀಘ್ರ ನೇಮಕ
ವಿಕೆಒ ಶಾಲೆಯಲ್ಲಿ 28 ಹೊಸ ಸರಕಾರಿ ಶಿಕ್ಷಕರನ್ನು ನೇಮಿಸಲಾಗುವುದು. ಯಾವುದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲ. ಎಲ್ಲರೂ ಶಾಂತವಾಗಿದ್ದರೆ, ಎಲ್ಲವೂ ಶೀಘ್ರವೇ ಸರಿಹೋಗಲಿದೆ.
-ರೋಷನ್ ಬೇಗ್, ಶಿವಾಜಿನಗರ ಶಾಸಕ