ಡಿ.ಕೆ.ಚೌಟ ನಿಧನಕ್ಕೆ ಸಚಿವೆ ಡಾ. ಜಯಮಾಲ ಸಂತಾಪ
ಉಡುಪಿ: ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ರಂಗಭೂಮಿ, ಚಿತ್ರಕಲೆ ಈ ಮುಂತಾದ ಕ್ಷೇತ್ರಗಳ ಧೀಮಂತರಾಗಿ ಉತ್ತಮ ರಂಗ ಸಂಘಟಕರಾಗಿ ನಮ್ಮ ನಾಡಿಗೆ ವಿಶಿಷ್ಟ ಸೇವೆ ಸಲ್ಲಿಸಿದ್ದ ಶ್ರೀ ಡಿ.ಕೆ. ಚೌಟ ಅವರು ಇಂದು ನಿಧನರಾಗಿರುವುದು ದುಃಖದ ಸಂಗತಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ. ಜಯಮಾಲ ತಿಳಿಸಿದ್ದಾರೆ.
ಚೌಟ ಅವರದ್ದು ಬಹುಮುಖ ವ್ಯಕ್ತಿತ್ವವಾಗಿತ್ತು. ಕನ್ನಡ ಮತ್ತು ತುಳು ಭಾಷೆಗಳ ಎಲ್ಲ ಸೃಜನಶೀಲ ಕ್ಷೇತ್ರಗಳಲ್ಲಿಯೂ ಶ್ರೀ ಚೌಟ ಅವರ ಕೊಡುಗೆಗಳು ಮಾದರಿಯಾಗಿವೆ. ಅವರು ಒಬ್ಬರೇ ಸಾಂಸ್ಕೃತಿಕ ಲೋಕದಲ್ಲಿ ಬೆಳೆಯಲಿಲ್ಲ. ಅನೇಕ ಕಲಾವಿದರನ್ನು ಹಾಗೂ ಕಲಾತಂಡಗಳನ್ನು ಬೆಳೆಸಿದರು. ಪ್ರತಿಷ್ಠಿತ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚೌಟ ಅವರು ಕಲಾವಿದರ ಅಭ್ಯುದಯಕ್ಕೆ ಕೈಗೊಂಡ ಯೋಜನೆಗಳು-ಯೋಚನೆಗಳು ನಿಜಕ್ಕೂ ಅನನ್ಯವಾಗಿವೆ. ಇಂತಹ ಅಪರೂಪದ ಪ್ರತಿಭಾ ಚೇತನವನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. ದಿವಂಗತರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಡಾ. ಜಯಮಾಲ ತಿಳಿಸಿದ್ದಾರೆ.