ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿ: ವಿಶ್ವನಾಥ್
ಬೆಂಗಳೂರು, ಜೂ.20: ಜೆಡಿಎಸ್ ವರಿಷ್ಠ ದೇವೇಗೌಡರು ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕು. ಎಚ್.ಡಿ. ಕುಮಾರಸ್ವಾಮಿ ಸಿಎಂ ಹುದ್ದೆಯ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನವನ್ನೂ ವಹಿಸಿಕೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು. ಈ ಹಿಂದೆ ಎಸ್ಎಂ ಕೃಷ್ಣ ಹಾಗೂ ದೇವರಾಜ ಅರಸ್ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಮಧ್ಯಂತರ ಚುನಾವಣೆ ಯಾವಾಗಲೂ ಬೇಕಾದರೂ ಬರಬಹುದು ಎಂದು ನಮ್ಮ ನಾಯಕರು ಹೇಳುತ್ತಿದ್ದಾರೆ. ಜೆಡಿಎಸ್ ರಾಷ್ಟ್ರಮಟ್ಟದಲ್ಲಿ ಬೆಳೆಸಬೇಕು ಎಂದು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
" ಇಬ್ಬರು ಪಕ್ಷೇತರರನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ಆದರೆ, ಅವರಿಗೆ ಖಾತೆಯನ್ನು ಹಂಚಿಕೆ ಮಾಡದೆ ಅವರನ್ನು ಅವಮಾನಿಸಲಾಗಿದೆ. ಅವರಿಗೆ ಆದಷ್ಟು ಬೇಗನೆ ಖಾತೆ ಹಂಚಬೇಕಾಗಿದೆ. ಕಾಂಗ್ರೆಸ್ನ ಹಿರಿಯ ನಾಯಕ ರೋಷನ್ ಬೇಗ್ರನ್ನು ಎಐಸಿಸಿ ಅಮಾನತುಗೊಳಿಸಿದ್ದು ಸರಿಯಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ನ್ನು ಬೆಂಬಲಿಸಿದ್ದರು. ಕಾಂಗ್ರೆಸ್ನಲ್ಲಿದ್ದಾಗ ನನ್ನನ್ನೂ ಇದೇ ರೀತಿ ಮಾಡುವ ಸಾಧ್ಯತೆಯಿತ್ತು. ಹಾಗಾಗಿ ನಾನು ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದೆ. ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಸರಿಯಲ್ಲ.’’ ಎಂದು ವಿಶ್ವನಾಥ್ ಹೇಳಿದ್ದಾರೆ.