ನಿಮ್ಮೊಂದಿಗೆ ನಾವಿದ್ದೇವೆ, ವಾಪಸ್ ಬನ್ನಿ: ಮನ್ಸೂರ್ ಖಾನ್ಗೆ ಸಚಿವ ಝಮೀರ್ ಮತ್ತೊಮ್ಮೆ ಮನವಿ
ಐಎಂಎ ಬಹುಕೋಟಿ ವಂಚನೆ ಪ್ರಕರಣ
ಬೆಂಗಳೂರು, ಜೂ. 24: ‘ನೀವು ಬನ್ನಿ ನಿಮ್ಮೊಂದಿಗೆ ನಾವಿದ್ದೇವೆ. ಬಡವರ ಹಣವನ್ನು ಹಿಂದಿರುಗಿಸಿ’ ಎಂದು ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರ ಇರುವುದು ಬಡವರಿಗಾಗಿ, ಶ್ರೀಮಂತರಿಗಾಗಿ ಅಲ್ಲ. ನಿಮಗೆ ಜೀವ ಭಯವಿದ್ದರೆ ಚಿಂತೆ ಮಾಡುವುದು ಬೇಡ. ಅವರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸರು-ಕಾನೂನು ಇದೆ ಎಂದು ಹೇಳಿದರು.
ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನಿನ್ನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತನ್ನ ಹೆಸರು ಪ್ರಸ್ತಾಪ ಮಾಡಿದ್ದಾನೆ. ನಾನು ಈ ಹಿಂದೆಯೇ ಹೇಳಿದ್ದೆ. ನೀವು ಯಾವ ರಾಜಕಾರಣಿಗಳಿಗೆ ಹಣ ನೀಡಿದ್ದೀರಿ ಎಂದು ಹೇಳಿದರೆ ಅದನ್ನು ವಾಪಸ್ ಪಡೆದು ಜನರಿಗೆ ನೀಡಬಹುದು ಎಂದು ಹೇಳಿದರು.
ಮನ್ಸೂರ್ ಖಾನ್ ಹಿಂದಿರುಗಿದರೆ ಸತ್ಯ ಗೊತ್ತಾಗಲಿದೆ. ಅವರು ಯಾವ ಯಾವ ರಾಜಕಾರಣಿಗೆ ಹಣ ಕೊಟ್ಟಿದಾರೆಂಬುದರ ಬಗ್ಗೆ ಪಟ್ಟಿ ನೀಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಸರಿಯಲ್ಲ. ಒಟ್ಟಾರೆ 2 ಸಾವಿರ ಕೋಟಿ ರೂ.ವಂಚನೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.