ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸದಸ್ಯರಿಗಾಗಿ ಆರೋಗ್ಯ ಮೇಳ
ಉಡುಪಿ, ಜೂ.24: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಹಾಗೂ ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿಯ ಜಂಟಿ ಆಶ್ರಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸದಸ್ಯರಿಗಾಗಿ ಆರು ದಿನಗಳ ಕಾಲ ಹಮ್ಮಿಕೊಳ್ಳಲಾದ ಆರೋಗ್ಯ ಮೇಳವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸೋಮವಾರ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಉದ್ಘಾಟಿಸಿದರು.
ಜನಸಾಮಾನ್ಯರ ಆರೋಗ್ಯವನ್ನು ಕಾಪಾಡಲು ಆಯುರ್ವೇದ ಬಹಳಷ್ಟು ಪ್ರಾಯೋಜನಕಾರಿಯಾಗಿದೆ. ಆರೋಗ್ಯ ಮೇಳವು ಕೇವಲ ತೋರಿಕೆ ಅಥವಾ ಕಾಟಾಚಾರವಾಗಿರದೆ ನಿಜಕ್ಕೂ ಜನಸ್ಪಂದನೆಯಾಗಿರಬೇಕು. ಅಲೋಪತಿಯ ವ್ಯವಸ್ಥೆಯಲ್ಲಿ ಆಗಾಗ ನಡೆಯುವ ಆರೋಗ್ಯ ಮೇಳ ಈಗ ಆಯುರ್ವೇದದಲ್ಲೂ ನಡೆಸುವ ಹಾಗೆ ಮಾಡಿದ ಸಂಸ್ಥೆಯ ಹೆಜ್ಜೆ ನಿಜಕ್ಕೂ ಮಾದರಿಯಾಗಿದೆ ಎಂದು ರಘುಪತಿ ಭಟ್ ತಿಳಿಸಿದರು.
ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಹಾಗೂ ರಾಜ್ಯ ಸರಕಾರದ ಆರೋಗ್ಯ ಭಾಗ್ಯ ಯೋಜನೆಗಳು ಕೂಡ ಜನರ ಆರೋಗ್ಯವನ್ನು ಕೇಂದ್ರೀಕರಿಸಿವೆ. ಪ್ರಸ್ತುತ ಈ ಆರೋಗ್ಯ ಮೇಳದಲ್ಲಿ 1500 ಜನರಿಗೆ ತಲುಪಲಿದ್ದು ಅವರ ಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಬಿ. ಯಶೋವರ್ಮಾ, ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಿಭಾಗೀಯ ಕಚೇರಿಯ ವ್ಯವಸ್ಥಾಪಕ ಭಾಸ್ಕರ ಹಂದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ, ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್, ಉಡುಪಿ ತಾಲೂಕು ಯೋಜನಾಧಿಕಾರಿ ರೋಹಿತ್, ಬ್ರಹ್ಮಾವರ ತಾಲೂಕಿನ ದಿನೇಶ್, ರಾಜ್ಯ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ನಾತಕೋತ್ತರ ಹಾಗೂ ಪಿಎಚ್ಡಿ ಅಧ್ಯಯನ ಕೇಂದ್ರದ ಸಹಾಯಕ ಡೀನ್ ಡಾ.ನಾಗರಾಜ್ ಎಸ್. ವಂದಿಸಿದರು. ಪ್ರಾಧ್ಯಾ ಪಕ ಡಾ.ರವೀಂದ್ರ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಈ ಮೇಳವು ಉಚಿತ ಆಯುರ್ವೇದ ತಪಾಸಣೆ ಹಾಗೂ ಸಲಹಾ ಶಿಬಿರ, ಉಚಿತ ರಕ್ತ ತಪಾಸಣೆ ಮತ್ತು ಇಸಿಜಿ ಪರೀಕ್ಷೆ, ಗುರುತಿಸಲ್ಪಟ್ಟ ಖಾಯಿಲೆಗೆ ರಿಯಾಯಿತಿ ದರದಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯಗಳು ಮತ್ತು ಔಷಧಿ ವಿತರಣೆ, ಉಚಿತ ಆರೋಗ್ಯ ಕಾರ್ಡ್ ವಿತರಣೆ, ಆರೋಗ್ಯ ಕಾರ್ಡ್ ಪಡೆದವರಿಗೆ ಮುಂದಿನ ದಿನಗಳಲ್ಲಿ ಹೊರರೋಗಿ ಹಾಗೂ ಒಳರೋಗಿ ವಿಭಾಗದಲ್ಲಿ ಕೊಡ ಲಾಗುವ ಎಲ್ಲಾ ಚಿಕಿತ್ಸೆ ಹಾಗೂ ಜೌಷಧಿಗಳಿಗೆ ವಿಶೇಷ ರಿಯಾಯಿತಿ ಸೌಲಭ್ಯ ಗಳನ್ನು ಒಳಗೊಂಡಿದೆ. ಈ ಶಿಬಿರವು ಜೂ.29ರವರೆಗೆ ನಡೆಯಲಿದೆ.