ಟೋಲ್ ಸಿಬ್ಬಂದಿಗಳಿಗೆ ಹಲ್ಲೆ: ಬಿಜೆಪಿ ಸಂಸದನ ಭದ್ರತಾ ಸಿಬ್ಬಂದಿ ಸೆರೆ
ಆಗ್ರಾ,ಜು.10: ಇಟಾವಾದ ಬಿಜೆಪಿ ಸಂಸದ ರಾಮಶಂಕರ ಕಥೇರಿಯಾ ಅವರ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೂ.6ರಂದು ಆಗ್ರಾ ಜಿಲ್ಲೆಯ ಏತ್ಮಾದಪುರ ಪ್ರದೇಶದಲ್ಲಿ ಟೋಲ್ ಪ್ಲಾಝಾದ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ,ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಆರೋಪಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು,ತನಿಖೆ ಪ್ರಗತಿಯಲ್ಲಿದೆ ಎಂದು ಏತ್ಮಾದಪುರ ಠಾಣಾಧಿಕಾರಿಗಳು ತಿಳಿಸಿದರು.
ಬಂಧಿತ ಆರೋಪಿಗಳನ್ನು ವಿಪಿನ್ ಚೌಧರಿ ಮತ್ತು ಪಿಂಕು ಉಪಾಧ್ಯಾಯ ಎಂದು ಗುರುತಿಸಲಾಗಿದೆ.
ಭದ್ರತಾ ಸಿಬ್ಬಂದಿ ಮತ್ತು ಟೋಲ್ ಪ್ಲಾಝಾ ಸಿಬ್ಬಂದಿ ನಡುವಿನ ವಾಗ್ವಾದ ದಾಖಲಾಗಿದ್ದ ಸಿಸಿಟಿವಿ ತುಣುಕಿನ ಆಧಾರದಲ್ಲಿ ಪೊಲೀಸ್ ದೂರು ದಾಖಲಾಗಿತ್ತು. ಬೂಮ್ ಬ್ಯಾರಿಯರ್ ಇತರ ವಾಹನಗಳ ಮೇಲೆ ಬೀಳದಂತೆ ಸರದಿಯಲ್ಲಿ ಪ್ಲಾಝಾದಿಂದ ನಿರ್ಗಮಿಸುವಂತೆ ಸಿಬ್ಬಂದಿ ಸಂಸದರೊಂದಿಗಿದ್ದ ವಾಹನಗಳ ಚಾಲಕರಿಗೆ ಸೂಚಿಸಿದ್ದು, ವಾಗ್ವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭ ಆರೋಪಿಗಳು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು,ಕಥೇರಿಯಾರ ಕಣ್ಣೆದುರಿಗೇ ಈ ಗಲಾಟೆ ನಡೆದಿತ್ತು.