ಜು.15ರಂದು ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ
ಬಂಟ್ವಾಳ, ಜು. 11: ಬಿ.ಸಿ.ರೋಡಿನ ಜೋಡುಮಾರ್ಗದಲ್ಲಿರುವ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಕಾರ್ಯಕ್ರಮ ಜು. 15ರಂದು ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಅವರು ಸೊಸೈಟಿಯನ್ನು ಉದ್ಘಾಟಿಸಲಿದ್ದು, ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಹೊಟೇಲ್ ರಂಗೋಲಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ಸಮಾನ ಮನಸ್ಕರು ಸೇರಿಕೊಂಡು ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸೊಸೈಟಿಯನ್ನು ಆರಂಭಿಸಿದ್ದೇವೆ. ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತಗೊಂಡು, ಆಭರಣ, ಸಾಲ, ವಾಹನ ಸಾಲ, ಕೃಷಿಯೇತರ ಸಾಲ ಸೌಲಭ್ಯಗಳೊಂದಿಗೆ ಕಚೇರಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಹಸು ಕರುವಿನ ಲಾಂಛನ
ಮುಂದೆ ತಾಲೂಕಿನ ಗ್ರಾಮೀಣ ಭಾಗಗಳಿಗೂ ವಿಸ್ತರಿಸುವ ಇರಾದೆ ಇದೆ ಎಂದು ಅವರು, ಹಸು ಕರುವಿನ ಲಾಂಛನವನ್ನು ಸೊಸೈಟಿ ಹೊಂದಿದ್ದು, ಇದು ಗ್ರಾಹಕರ ಮತ್ತು ಸೊಸೈಟಿ ಬಾಂಧವ್ಯವನ್ನು ಸೂಚಿಸುತ್ತದೆ. ಸಹಕಾರ ಸಂಘಗಳ ನಿಬಂಧನೆಗೆ ಪೂರಕವಾಗಿ ಕೆಲಸ ಮಾಡಲಿರುವ ಸಂಸ್ಥೆ ಬಂಟ್ವಾಳ ತಾಲೂಕಿನ ಜನರ ಆಶೋತ್ತರಗಳನ್ನು ಆರ್ಥಿಕ ಅಗತ್ಯಗಳಿಗೆ ನೆರವಾಗ ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೊಸೈಟಿಯ ಸಲಹಾ ಸಮಿತಿಯಲ್ಲಿ ಪ್ರಕಾಶ ಕಾರಂತ, ಬಿ.ಎಚ್. ಖಾದರ್, ಮಾಧವ ಮಾವೆ ಇದ್ದಾರೆ. ಉಪಾಧ್ಯಕ್ಷರಾಗಿ ಮಾಯಿಲಪ್ಪ ಸಾಲಿಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬೇಬಿ ಕುಂದರ್, ಆಡಳಿತ ಮಂಡಳಿ ನಿರ್ದೇಶಕರಾಗಿ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಸುದರ್ಶನ ಜೈನ್, ಬಿ.ಎಂ.ಅಬ್ಬಾಸ್ ಅಲಿ, ಮಂಜುಳಾ ಮಾಧವ ಮಾವೆ, ವಾಣಿ ಪ್ರಕಾಶ ಕಾರಂತ, ಪಿಯೂಸ್ ಎಲ್. ರೋಡ್ರಿಗಸ್, ನಾರಾಯಣ ನಾಯಕ್, ಆಲ್ಫೋನ್ಸ್ ಮಿನೇಜಸ್, ಅಮ್ಮು ಅರ್ಬಿಗುಡ್ಡೆ ಕಾರ್ಯನಿರ್ವಹಿಸಲಿದ್ದಾರೆ ಎಂದು ರೈ ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬೇಬಿ ಕುಂದರ್ ಅವರು ಸೊಸೈಟಿಯ ರೂಪುರೇಷೆ ಹಾಗೂ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ನಿರ್ದೇಶಕರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.