ಮುಕ್ತ ವಿವಿ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಜು.11: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ವಿವಿಧ ಕೋರ್ಸುಗಳ ಅಧ್ಯಯನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಮಂಗಳೂರಿನಲ್ಲೂ ಪ್ರಾದೇಶಿಕ ಕೇಂದ್ರವಿದೆ. 2023ರರೆಗೆ ಯುಜಿಸಿ ಮಾನ್ಯತೆ ನೀಡಿರುವುದರಿಂದ ಮುಕ್ತ ವಿವಿಯ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳು ಗೊಂದಲ ಪಡಬೇಕಿಲ್ಲ. 2023-24ನೇ ಸಾಲಿನಿಂದ ವಿಶ್ವವಿದ್ಯಾನಿಲಯವು ಮಾನ್ಯತೆಯನ್ನು ಪುನರ್ ನವೀಕರಣ ಮಾಡಿಸಿಕೊಳ್ಳಲು ಯುಜಿಸಿ ನಿರ್ದೇಶಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ದೂರ ಶಿಕ್ಷಣದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಡಾ.ವಿದ್ಯಾಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಿಎ, ಬಿಕಾಂ, ಸೇರಿದಂತೆ ಇತರ ಡಿಪ್ಲೊಮಾ ಕೋರ್ಸುಗಳಿಗೆ ಮೇ 6ರಿಂದಲೇ ಪ್ರವೇಶಾತಿ ಆರಂಭವಾಗಿದ್ದು, ಜು.25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಜು.21ರಿಂದ ರೂ.200ರಂತೆ ದಂಡ ಸಹಿತ ಪ್ರವೇಶಾತಿ ಇರಲಿದೆ. ಎಂಬಿಎ ಪ್ರವೇಶಾತಿಗೆ ಜು.20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಜು.28ರಂದು ನಡೆಯಲಿದೆ ಎಂದವರು ತಿಳಿಸಿದರು.
ವಿದ್ಯಾರ್ಥಿಗಳು ಮಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯಿಂದಲೂ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದು. ಮುಂದೆ ತಾಲೂಕು ಕೇಂದ್ರದಲ್ಲಿ ಅಧ್ಯಯನ ಕೇಂದ್ರ ತೆರೆಯುವ ಉದ್ದೇಶವಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆನ್ಲೈನ್ ಪೋರ್ಟಲ್ ಸಿದ್ಧವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಮಾಹಿತಿ ದೊರೆಯಲಿದೆ. ಆನ್ಲೈನ್ ಮೂಲಕವೇ ಶುಲ್ಕ ಪಾವತಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ದೂರ ಶಿಕ್ಷಣದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಡಾ.ವಿದ್ಯಾಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಬಸವರಾಜು, ರಥಬೀದಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.