ಕೊಡವೂರು: ಕೆಸರಿನಲ್ಲಿ ಸಂಭ್ರಮಿಸಿದ ‘ಕೆಸರ್ಡೇರ್ ಬಿರ್ಸೆರ್’
ಉಡುಪಿ, ಜು.11: ಸುಮನಸಾ ಕೊಡವೂರು ವತಿಯಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗ ದೊಂದಿಗೆ ಐದನೆ ವರ್ಷದ ಕೆಸರ್ಡೇರ್ ಬಿರ್ಸೆರ್ ಕಾರ್ಯಕ್ರಮವನ್ನು ಕೊಡವೂರು ಸಂಕದ ಬಳಿಯ ಗದ್ದೆಯಲ್ಲಿ ರವಿವಾರ ಆಯೋಜಿಸಲಾಗಿತ್ತು.
ಇಂದು ಪವಿತ್ರವಾದ ಮಣ್ಣು ಮಾಲಿನ್ಯಗೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆಗೆ ಜಾಗೃತಿಯ ಸಂಕೇತವಾಗಿ ಕ್ಷೆರಧಾರೆಯೆರೆದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ನಗರಸಭಾ ಸದಸ್ಯ ವಿಜಯ ಕೊಡವೂರು, ಕಲ್ಯಾಣಪುರ ಗ್ರಾಪಂ ಸದಸ್ಯ ಕೃಷ್ಣ ದೇವಾಡಿಗ, ಉದ್ಯಮಿ ಮಧುಸೂಧನ್ ಪೈ, ಪತ್ರಕರ್ತ ಜನಾರ್ದನ ಕೊಡವೂರು, ಪ್ರಗತಿಪರ ಕೃಷಿಕ ಸದಾನಂದ ಶೇರಿಗಾರ್, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಗೌರವಾಧ್ಯಕ್ಷ ಎಂ.ಎಸ್.ಭಟ್, ಸಂಚಾಲಕ ಭಾಸ್ಕರ ಪಾಲನ್, ಕ್ರೆಡಾ ಕಾರ್ಯದರ್ಶಿ ಹರೀಶ್ ಕಲ್ಯಾಣಪುರ ಮೊದಲಾದವರು ಉಪಸ್ಥಿತರಿದ್ದರು.
ಅತಿಥಿ ಗಣ್ಯರನ್ನು ಮುಟ್ಟಾಳೆ, ಗೆಂದಾಳೆಯ ಸೀಯಾಳ ಮತ್ತು ವಾಲೆಬೆಲ್ಲ ದೊಂದಿಗೆ ಸಾಂಪ್ರದಾಯಿಕವಾಗಿ ಸತ್ಕರಿಸಲಾಯಿತು. ಕೆಸರುಗದ್ದೆಗೆ ಪೂರಕ ವಾಗಿ ಓಟ, ಹಿಮ್ಮಖ ಓಟ, ಸಂಯಾಮಿ ಓಟ, ಹಾಳೆ ಎಳೆಯುವುದು, ಕಪ್ಪೆ ಓಟ, ಉಪ್ಪಿನ ಮೂಟೆ, ಈಜುವುದು, ಕೆರೆದಡ, ರಿಂಗ್ ಓಟ, ಲಗೋರಿ, ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಬೆರಿಚೆಂಡ್, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ಒಟ್ಟು 20 ವಿವಿಧ ಬಗೆಯ ಆಟೋಟಗಳನ್ನು ಏರ್ಪ ಡಿಸಲಾಗಿತ್ತು. ವಿಜೇತರಿಗೆ ಹೂಗಿಡಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಗಂಜಿ, ಹುರುಳಿ ಚಟ್ನಿ, ಮಳಿವೆ ಸುಕ್ಕದ ಊಟೋಪಚಾರವಿತ್ತು.