ಬಿಸಿಯೂಟ: ಮೊಟ್ಟೆಯನ್ನು ಬೇಯಿಸಿ ಮಕ್ಕಳ ಮನೆಗೆ ಕಳುಹಿಸಲಿದೆ ಈ ರಾಜ್ಯ ಸರಕಾರ!
ರಾಯ್ಪುರ, ಜು. 18: ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದೂಟದಲ್ಲಿ ಮಕ್ಕಳಿಗೆ ಮೊಟ್ಟೆ ಪೂರೈಸಲು ‘ವಿಶೇಷ ವ್ಯವಸ್ಥೆ’ ಮಾಡಲಾಗುವುದು ಎಂದು ಛತ್ತೀಸ್ಗಡ ಸರಕಾರ ಮಂಗಳವಾರ ಪ್ರಕಟಿಸಿದೆ.
ಮಧ್ಯಾಹ್ನದೂಟದಲ್ಲಿ ಮೊಟ್ಟೆ ಬಯಸದ ವಿದ್ಯಾರ್ಥಿಗಳನ್ನು ಎರಡು ವಾರಗಳ ಒಳಗೆ ಗುರುತಿಸಲು ಶಾಲಾ ವಿಕಾಸ ಸಮಿತಿಗಳು, ಶಾಲಾ ಅಭಿವೃದ್ಧಿ ಸಮಿತಿಗಳು ಹಾಗೂ ಹೆತ್ತವರೊಂದಿಗೆ ಸಭೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದೆ. ಮೊಟ್ಟೆಯನ್ನು ಪ್ರತ್ಯೇಕವಾಗಿ ಬೇಯಿಸಲಾಗುವುದು. ಊಟ ಬಡಿಸುವಾಗ ಸಸ್ಯಹಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಇಲಾಖೆ ಹೇಳಿದೆ.
ಸಸ್ಯಹಾರಿ ವಿದ್ಯಾರ್ಥಿಗಳಿಗೆ ಮೊಟ್ಟೆಗೆ ಪರ್ಯಾಯವಾಗಿ ಸೋಯಾ ಹಾಲು, ಪ್ರೋಟಿನ್ ಕ್ರಂಚ್, ಬಿಸ್ಕೆಟ್, ಬೇಯಿಸಿದ ಧಾನ್ಯ ನೀಡಲಾಗುವುದು. ‘‘ಮೊಟ್ಟೆ ವಿತರಿಸಲು ಯಾವುದೇ ವ್ಯವಸ್ಥೆ ಮಾಡಿಲ್ಲ. (ಶಾಲೆಯಲ್ಲಿ ಮೊಟ್ಟೆ ವಿತರಿಸುವುದನ್ನು ಸಸ್ಯಹಾರಿ ವಿದ್ಯಾರ್ಥಿಗಳ ಪೋಷಕರು ಬಯಸದೇ ಇದ್ದರೆ) ಆದುದರಿಂದ ಶಾಲಾ ಅಭಿವೃದ್ಧಿ ಸಮಿತಿ ವಿದ್ಯಾರ್ಥಿ (ಮೊಟ್ಟೆ ತಿನ್ನುವ)ಗಳಿಗೆ ಮನೆಯಲ್ಲಿ ಮೊಟ್ಟ್ಟೆ ಪೂರೈಸಲು ವ್ಯವಸ್ಥೆ ಮಾಡಿದೆ’’ ಎಂದು ಇಲಾಖೆ ಹೇಳಿದೆ.